Malenadu Mitra
ರಾಜ್ಯಶಿವಮೊಗ್ಗಸಾಗರ

ಸಿಗಂದೂರಲ್ಲಿ ಭಕ್ತರ ಸಂಭ್ರಮ

ತುಮರಿ,ಜ.೧೫: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿಗೆ ಸಂಕ್ರಮಣ ವಿಶೇಷ ಪೂಜೆ ಸಡಗರ ಸಂಭ್ರಮದಿಂದ ಸಮಾಪನಗೊಂಡಿತು. ಪ್ರತಿ ವರ್ಷ ಸಂಕ್ರಮಣದಂದು ಎರಡು ದಿನಗಳ ಕಾಲ ದೇವಿಯ ಜಾತ್ರೆ ನಡೆಯುತಿತ್ತು. ಕೋವಿಡ್ ಕಾರಣದಿಂದ ಈ ಬಾರಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಆದರೆ ಪ್ರತಿವರ್ಷದಂತೆ ಈ ಬಾರಿಯೂ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ಗುರುವಾರ ಚೌಡೇಶ್ವರಿಯ ಮೂಲ ಸ್ಥಳ ಸೀಗೆಕಣಿವೆಯಲ್ಲಿ ಮೊದಲ ಪೂಜೆ ನೆರವೇರಿಸಿದ್ದು, ಅಲ್ಲಿಂದ ಜ್ಯೋತಿಯ ಮೂಲಕ ಸಿಗಂದೂರಿಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಜ್ಯೋತಿಯನ್ನು ತರಲಾಯಿತು. ಧರ್ಮದರ್ಶಿ ಡಾ.ರಾಮಪ್ಪ ದಂಪತಿ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಹಾಜರಿದ್ದರು.
ಕೋವಿಡ್ ಸುರಕ್ಷತಾ ಕ್ರಮ:
ದೇವಸ್ಥಾನ ಆಡಳಿತ ಮಂಡಳಿಯಿಂದ ಉಚಿತ ಮಾಸ್ಕ್ ವಿತರಿಸಿದ್ದಲ್ಲದೆ, ಮೂರು ಜಾಗಗಳಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿತ್ತು. ದೇಗುಲಕ್ಕೆ ಬಂದಿದ್ದ ಎಲ್ಲಾ ಭಕ್ತಾದಿಗಳಿಗೆ ಟನಲ್‌ನಲ್ಲಿ ಸ್ಯಾನಿಟೈಸ್ ಮಾಡಿ ದೇವಾಲಯದ ಒಳಗೆ ಬಿಡಲಾಗುತಿತ್ತು. ಇದಲ್ಲದೆ ಪ್ರತಿ ದ್ವಾರಗಳಲ್ಲಿ ಥರ್ಮಲ್ ಸ್ಚ್ಯಾನರ್ ಅಳವಡಿಸಲಾಗಿತ್ತು. ದೇವಾಲಯದ ಆವರಣದ ಹಲವು ಸ್ಥಳಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಸಾಗರದಿಂದ ಹೊಳೆಬಾಗಿಲು ಹಾಗೂ ಹೊಳೆಬಾಗಿಲಿನಿಂದ ದೇವಸ್ಥಾನಕ್ಕೆ ಸುಮಾರು ೧೫ ಕ್ಕೂ ಹೆಚ್ಚು ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಗುರುವಾರ ಒಂದೇ ದಿನ ಸುಮಾರು ೧೫ ಸಾವಿರ ಭಕ್ತರಿಗೆ ಮಧ್ಯಾಹ್ನದ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರವೂ ದೇವಾಲಯಕ್ಕೆ ಭಕ್ತ ಸಮೂಹ ಹರಿದು ಬಂದಿದ್ದು, ಎಂದಿನಂತೆ ದೇವಿಯ ದರ್ಶನ ಪಡೆದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಬೆಳಗ್ಗೆ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದರು. ಈ ಸಂದರ್ಭ ದರ್ಮದರ್ಶಿ ಡಾ.ರಾಮಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಂಟೆ ಹರೀಶ್ ಆಡಳಿತ ಮಂಡಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಸ್ಥಳೀಯರ ಭಾಗಿದಾರಿಕೆ:
ಸಿಗಂದೂರು ಜಾತ್ರಾ ಸಮಯದಂತೆ ಈ ಬಾರಿಯ ವಿಶೇಷ ಪೂಜೆ ಸಂದರ್ಭ ಕರೂರು ಹಾಗೂ ಬಾರಂಗಿ ಹೋಬಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ಜಾತ್ರೆ ಇರುವ ಬಗ್ಗೆ ಯಾವುದೇ ಬ್ಯಾನರ್, ಕರಪತ್ರ ಇತ್ಯಾದಿ ಪ್ರಚಾರ ಪರಿಕರ ಬಳಸದೇ ಇದ್ದರೂ, ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿತ್ತು. ಕರೂರು ಸೀಮೆಯ ಸುಮಾರು ೮೦೦ ಮಹಿಳೆಯರು ಕುಂಭಹೊತ್ತು ಮೆರವಣಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Ad Widget

Related posts

ಶಿವಮೊಗ್ಗ ನಗರದ ಹೊಸ ಬಡಾವಣೆಗಳಿಗೆ 96ಕೋಟಿ ರೂ. ವೆಚ್ಚದಲ್ಲಿ ನೀರು

Malenadu Mirror Desk

ಭದ್ರಾವತಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಸೆರೆ

Malenadu Mirror Desk

ಮಲೆನಾಡಿನಾದ್ಯಂತ ಸಡಗರ ಸಂಭ್ರಮದ ಗೌರಿ ಹಬ್ಬ, ತವರಲ್ಲಿನ ಬರದ ಛಾಯೆಗೆ ಮರುಗಿದ ಹೆಣ್ಣುಮಕ್ಕಳು,

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.