ಎಲ್ಲ ಸರಿ ಇದ್ದಿದ್ದರೆ ಆ ಹುಡುಗಿ ಬೆಂಗಳೂರಿನಲಿ ಕಂಪನಿಯೊಂದರಲ್ಲಿ ಕೆಲಸದಲ್ಲಿರುತಿದ್ದಳು. ಎರಡು ದಿನದಲ್ಲೇ ಬೆಂಗಳೂರಿಗೆ ಹೋಗಿಬೇಕಿದ್ದ ಆಕೆಯನ್ನು ತಡೆದದ್ದೇ ಹುಣಸೋಡು ಮಹಾಸ್ಫೋಟ. ಆರು ಜೀವಗಳನ್ನು ಬಲಿ ಪಡೆದಿರುವ ಈ ದುರಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅನೇಕ ಮಾರಕ ಪರಿಣಾಮ ಬೀರಿದೆ. ಪೂಜಾ ಎಂಬ ಯುವತಿ ಮನೆ ಸ್ಫೋಟ ಸಂಭವಿಸಿದ ಸ್ಥಳದಿಂದ ಅನತಿ ದೂರಲ್ಲಿಯೇ ಇದೆ. ಸ್ಫೋಟದ ದಿನ ಪೂಜಾ ಮನೆ ಸಂಪೂರ್ಣ ಜಖಂಗೊಂಡಿತಲ್ಲದೆ. ಬಾಗಿಲಿಂದ ಚಿಮ್ಮಿದ ಕಬ್ಬಣದ ರಾಡು ಆಕೆಯ ತಲೆಗೆ ಬಲವಾದ ಪೆಟ್ಟು ಮಾಡಿದೆ. ಜನವರಿ 23 ಕ್ಕೆ ಬೆಂಗಳೂರಿಗೆ ಕೆಲಸಕ್ಕೆ ಹೋಗಬೇಕಾಗಿದ್ದ ಆಕೆಯ ಕೆಲಸಕ್ಕೇ ಈ ಸ್ಫೋಟ ಕಂಟಕವಾಗಿ ಪರಿಣಮಿಸಿದೆ.
ಸ್ಫೋಟದಲ್ಲಿ ಪೂಜಾ ತಲೆಗೆ ಬಿದ್ದ ಬಲವಾದ ಹೊಡೆತದಿಂದ ಆಕೆ ಬದುಕುಳಿದಿದ್ದೇ ಹೆಚ್ಚು. ಸ್ಫೋಟದ ರಭಸಕ್ಕೆ ಪೂಜಾ ಅವರ ಮನೆಗೆ ಭಾರೀ ಹಾನಿಯಾಗಿದೆ. ಚಾವಣಿ ಹಾಗೂ ಗೋಡೆಗಳಿಗೆ ದಕ್ಕೆಯಾಗಿದೆ. ಸ್ಫೋಟದ ಪರಿಣಾಮದಿಂದ ಮನೆಯ ಬಳಿ ವಾಹನದ ಬಿಡಿಭಾಗಗಳು ಬಂದು ಬಿದ್ದಿವೆ. ಹೊಡೆತ ಬಿದ್ದಾಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಯುವತಿ ಈಗ ತನಗಾದ ನಷ್ಟವನ್ನು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗದಕಾರಣ ಆಕೆ ಬುಧವಾರ ನಗರಕ್ಕೆ ಬಂದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾಳೆ.
ಶಿರಾಳಕೊಪ್ಪ ಮೂಲದ ಪೂಜಾ ತಂದೆ-ತಾಯಿಯೊಂದಿಗೆ ಸುಮಾರು ೨೦ ವರ್ಷಗಳಿಂದ ಹುಣಸೋಡಿನಲ್ಲಿ ವಾಸವಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಅವರಿಗೆ ಬೆನ್ನು ನೋವೂ ಕೂಡಾ ಕಾಣಿಸಿಕೊಂಡಿದ್ದು, ಯಾವುದೇ ಕೆಲಸ ಮಾಡದಂತಾಗಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಎಚ್.ಆರ್.ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಅಲ್ಲಿಯೂ ಕೆಲಸ ಬಿಟ್ಟಿದ್ದಾರೆ. ಬೆಂಗಳೂರಲ್ಲಿ ಕೆಲಸಕ್ಕೂ ಹೋಗದಂತಾಗಿದೆ. ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ್ ಕರಿಯಣ್ಣ ಅವರು ಪೂಜಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಜಿಲ್ಲಾಡಳಿತ ಹಾಗೂ ಸಿದ್ದರಾಮಯ್ಯರಿಗೆ ಆಕೆಯಿಂದ ಮನವಿ ಕೊಡಿಸಿದ್ದಾರೆ.




