ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪ್ಯಾಸೆಂಜರ್ ರೈಲು ಗಾಡಿಯನ್ನು ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡದಿದ್ದಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲು ರಿಪ್ಪನ್ ಪೇಟೆಯ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಈ ಸಂಬಂಧ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಜುಲೈ ೧೧ ರೊಳಗೆ ರೈಲುಗಾಡಿ ನಿಲ್ಲಿಸುವ ನಿರ್ಧಾರ ಕೈಗೊಳ್ಳದಿದ್ದಲ್ಲಿ ಜು.೧೨ ರಿಂದ ನಿರಂತರ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು, ಬುಧವಾರ ರಿಪ್ಪನ್ಪೇಟೆ ಪಟ್ಟಣದ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಕಳೆದ ಏಪ್ರಿಲ್ ತಿಂಗಳಿಂದಲೂ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಅವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈವರೆಗೂ ರೈಲ್ವೆ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಇತಿಹಾಸ ಪ್ರಸಿದ್ದ ಮಾರಿಕಾಂಬ ದೇವಿ ಜಾತ್ರೆಯು ವರ್ಷದಲ್ಲಿ ಎರಡು ಭಾರಿ ನಡೆಸುತ್ತಿದ್ದು ಅಲ್ಲದೆ ರಾಜ ಮಹಾರಾಜರ ಕಾಲದಿಂದಲೂ ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯೊಂದಿಗೆ ಸುತ್ತಮುತ್ತಲಿನ ರೈತ ನಾಗರೀಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೋಗಿ ಬರಲು ಅನುಕೂಲ ವ್ಯವಸ್ಥೆಯಾಗಿತ್ತು. ಕೆಂಚನಾಲದಿಂದ ಇನ್ನೊಂದು ಸ್ಥಳಕ್ಕೆ ಹೋಗಿಬರಲು ಯಾವುದೇ ಬಸ್ ಸೌಲಭ್ಯಗಳಿಲ್ಲದಿದ್ದು ಮುಖ್ಯ ರಸ್ತೆಗೆ ತಲುಪಲು ಸುಮಾರು ಏಳೆಂಟು ಕಿ,ಮೀ ದೂರ ಕ್ರಮಸಬೇಕಾಗಿದೆ. ನಾಗರೀಕರು ದೂರದ ಊರುಗಳಿಗೆ ಹೋಗಿ ಬರುವುದು ಮತ್ತು ಅರೋಗ್ಯ ಕೇಂದ್ರ ಹಾಗೂ ದಿನನಿತ್ಯದ ಬಳಕೆ ವಸ್ತುಗಳ ಖರೀದಿಗೆ ಪಟ್ಟಣಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೆಂಚನಾಲದಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಯಾದರೆ ಸುತ್ತಮುತ್ತಲಿನ ನೂರಾರು ಕಂದಾಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೃದಯ ಭಾಗವಾಗಿರುವ ಇಲ್ಲಿ ನಿಲುಗಡೆಯಿಂದ ತುಂಬ ಅನುಕೂಲವಾಗುವುದೆಂದು. ಈ ಭಾಗದ ಜನರ ಬೇಡಿಕೆಗೆ ಪ್ರತಿಸ್ಪಂದಿಸದೆ ಇದ್ದಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ಜನರು ಸಿದ್ದರಿರುವುದಾಗಿ ಇಂದಿನ ಸಭೆಯಲ್ಲಿ ಹೇಳಿದ್ದಾರೆ. ಆದ್ದರಿಂದ ಸರಕಾರ ನಮ್ಮ ಮನವಿ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ,ಎ.ಪಿ.ಎಂ.ಸಿ.ನಿರ್ದೇಶಕ ಹೆಚ್.ಬಿ.ಕಲ್ಯಾಣಪ್ಪಗೌಡ,ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಅರ್.ಎ.ಚಾಬುಸಾಬ್,ಕೆಂಚನಾಲ ಗ್ರಾಮ ಪಂಚಾಯ್ತಿ ಸದಸ್ಯ ಪರಮೇಶ್ ಹೊನ್ನಕೊಪ್ಪ, ಬಿಜೆಪಿ ಮುಖಂಡ ನಾಗಾರ್ಜುನಸ್ವಾಮಿ,ಮಾರಿಕಾಂಬ ದೇವಸ್ಥಾನ ಸಮಿತಿಯ ನಿರ್ದೇಶಕ ಕೆ.ಎಂ.ಬಸವರಾಜ್,ಮಹೇಶ್ ಮಾಣಿಕೆರೆ ಇದ್ದರು.
ಬರುವ ಜುಲೈ ೧೧ ರೊಳಗೆ ಕೆಂಚನಾಲದ ರೈಲ್ವೆ ಸ್ಟೇಷನ್ನಲ್ಲಿ ರೈಲು ನಿಲುಗಡೆ ಮಾಡದಿದ್ದರೆ ಜುಲೈ ೧೨ ರಿಂದ ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ನಿರಂತರ ಉಗ್ರ ಪ್ರತಿಭಟನೆಯನ್ನು ಪಕ್ಷಾತೀತವಾಗಿ ನಡೆಸಲಾಗುವುದು
- ಬಿ.ಸ್ವಾಮಿರಾವ್ ,ಮಾಜಿ ಶಾಸಕ
ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಜುಲೈ.೧೧ ರ ಗಡವು ನೀಡಲಾಗಿದ್ದು ಇದಕ್ಕೆ ಸ್ಪಂದಿಸದಿದ್ದರೆ ನಾವು ಉಗ್ರ ಹೋರಾಟ ನಡೆಸಲಾಗುವುದು.ಈ ಸಂಬಂಧ ಜೈಲಿಗೆ ಹೋಗಲೂ ಸಿದ್ದ.
- ಆರ್.ಎನ್.ಮಂಜುನಾಥ, ಜೆಡಿಎಸ್ ಮುಖಂಡ
ಮಲೆನಾಡಿನ ಜನ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಊರ ಬಾಗಿಲಲ್ಲೇ ರೈಲು ಹೋಗುತ್ತಿದ್ದರೂ, ಸ್ಥಳೀಯ ಪ್ರಯಾಣಿಕರಿಗೆ ಅದರ ಸೌಲಭ್ಯ ಸಿಗದಿರುವುದು ದುರಂತವೇ ಸರಿ. ನಾಗರಿಕರ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ
-ಚಾಬೂಸಾಬ್, ಜೆಡಿಎಸ್ ರಾಜ್ಯ ಮುಖಂಡರು.


