Malenadu Mitra
ರಾಜ್ಯಶಿವಮೊಗ್ಗ

ಅಂತಃಕರಣವಿಲ್ಲದ ಪ್ರಧಾನಿ, ಚುನಾವಣೆ ಸ್ವಾರ್ಥಕ್ಕೆ ಕಾಯಿದೆ ವಾಪಸ್ : ಕಿಮ್ಮನೆ

ಅನ್ನದಾತರ ಮನವಿಗೆ ಕಿವಿಗೊಟ್ಟು ಮೊದಲೇ ವಿವಾದಿತ ಮೂರು ಕೃಷಿ ಕಾಯ್ದೆಗಳ ಸಾಧಕ-ಬಾಧಕಗಳನ್ನು ವಾಪಸ್ ಪಡೆದಿದ್ದರೆ 750 ಜೀವಗಳು ಉಳಿಯುತ್ತಿದ್ದವು ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ಮೋದಿ ಸರ್ಕಾರ ವಾಪಸ್ ತೆಗೆದುಕೊಳ್ಳು ೭೫೦ ಜೀವಗಳು ಬಲಿಯಾಗಬೇಕಾಯಿತು. ಜನ ವಿರೋಧಿ ಕಾಯ್ದೆಗಳನ್ನು ಹೋರಾಟದ ಮೂಲಕವೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಈ ದೇಶಕ್ಕೆ ಬಂದಿರುವುದು ಅತ್ಯಂತ ದುರಂತವಾಗಿದೆ. ಇದೊಂದು ಮೋದಿಯ ಹೇಡಿತನವಾಗಿದೆ. ಅವರಿಗೆ ಹೃದಯವೇ ಇಲ್ಲ. ಕಣ್ಣು, ಕಿವಿ, ಸೂಕ್ಷ್ಮ ಸಂವೇದನೆ ಮೊದಲೇ ಇಲ್ಲ. ಲೋಕಸಭೆ ಚುನಾವಣೆಯೂ ಸೇರಿದಂತೆ 5 ರಾಜ್ಯಗಳ ವಿಧಾನ ಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು ರದ್ದು ಮಾಡಿದ್ದಾರೆ ಅಷ್ಟೇ. ಇದರಲ್ಲಿ ಬೇರೆ ಯಾವ ಅಂತಃಕರಣವೂ ಇಲ್ಲ. ರೈತರ ಮೇಲೆ ಪ್ರೀತಿಯೂ ಇಲ್ಲ ಎಂದರು.
ಕೇಂದ್ರ ಸರ್ಕಾರ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನು ಕೊಂದ ಪಾಪದಲ್ಲಿದೆ. ಅವರ ಕುಟುಂಬಗಳಿಗೆ ತಕ್ಷಣವೇ ೨೫ ಲಕ್ಷ ರೂ. ಪರಿಹಾರ ನೀಡಬೇಕು. ಇನ್ನಾದರೂ ಜಾತಿ, ಧರ್ಮ, ಕೋಮುವಾದಿತನ ಬಿಡಬೇಕು. ಈಗಾಗಲೇ ಮೋದಿ ಭಕ್ತರು ಬಿಟ್ ಕಾಯಿನ್ ಗೆ ಸಂಬಂಧಪಟ್ಟಂತೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದರು. ಈಗ ಅದೇ ಮೋದಿಯವರು ಸಭೆ ಕರೆದಿರುವುದು ಏಕೆ ಎಂದು ಪ್ರಶ್ನೆ ಮಾಡಿದ ಅವರು, ಈ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.
ಜ್ಞಾನೇಂದ್ರ ತೀರ್ಥಹಳ್ಳಿಗೆ ಮಾತ್ರ ಮಂತ್ರಿ


ಆರಗ ಜ್ಞಾನೇಂದ್ರ ಅವರು ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಾಗಿಲ್ಲ. ಬದಲಾಗಿ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ.
ಆರಗ ಸಚಿವರಾದಾಗ ನಾನೂ ಅವರಿಗೆ ಶುಭ ಹಾರೈಸಿದ್ದೆ. ಆದರೆ ಇದೀಗ ಅವರು ನಡೆದುಕೊಳ್ಳುವ ರೀತಿ ನೋಡಿದರೆ ತೀರ್ಥಹಳ್ಳಿ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದ್ದು, ತೀರ್ಥಹಳ್ಳಿಯ ಪೊಲೀಸ್ ಠಾಣೆಗಳು ಹಾಗೂ ಆರ್‌ಎಫ್‌ಓ ಕಚೇರಿಗೆ ಮಾತ್ರ ಆರಗ ಸೀಮಿತರಾಗಿದ್ದಾರೆ. ಬಿಜೆಪಿಯವರೇ ಅಕ್ರಮವಾಗಿ ಮರಳು ಹೊಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರೇ ಗೃಹಸಚಿವರು, ಪೊಲೀಸರು ಆಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಕೆಲಸವನ್ನು ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಕಿಮ್ಮನೆ ಆರೋಪಿಸಿದರು.

ಇನ್ನೂ ಗಾಂಧಿ ಹಾಗೂ ನೆಹರೂ ವಿರುದ್ಧವಾಗಿ ಕೆಲವರು ಪುಸ್ತಕ ಬರೆಯುತ್ತಾರೆ. ಹೀಗೆ ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ. ಇವರು ತಮ್ಮ ಮಕ್ಕಳಿಗೇ ಮಾದರಿ ಆಗಲು ಸಾಧ್ಯವಿಲ್ಲ. ಇಂಥವರು ಗಾಂಧಿ ಹಾಗೂ ನೆಹರೂ ವಿರುದ್ಧವಾಗಿ ಪುಸ್ತಕ ಬರೆಯುತ್ತಾರೆ.ಪ್ರಧಾನಿ ಮೋದಿ ಚಿನ್ನದ ರಸ್ತೆ ಮಾಡುತ್ತಾರೆ, ದೇಶದ ಸಾಲ ತೀರಿಸಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಸಾಲಮಾಡಿ ದೇಶಬಿಟ್ಟು ಓಡಿಹೋದವರು ಯಾರೂ ವಾಪಸ್ ಬಂದಿಲ್ಲ ಎಂದು ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಮ್ಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೆಲುವಿನ ವಿಶ್ವಾಸ
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರಿದ್ದಾರೆ. ಜೊತೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಗೆಲುವಿಗೆ ಪೂರಕವಾದ ವಾತಾವರಣ ಕಂಡುಬರುತ್ತಿದ್ದು, ಎಲ್ಲಾ ಅಂಶಗಳು ಕಾಂಗ್ರೆಸ್ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ದ ಮತದಲ್ಲೇ ಗೆಲುವು ಸಾಧಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೇದಾ ವಿಜಯಕುಮಾರ್, ಕಲಗೋಡು ರತ್ನಾಕರ್, ಯಮುನಾ ರಂಗೇಗೌಡ, ಎನ್. ರಮೇಶ್, ಎಸ್.ಪಿ. ದಿನೇಶ್, ಕೆಸ್ತೂರು ಮಂಜುನಾಥ್, ದೇವಿ ಕುಮಾರ್, ಮುಡುಬ ರಾಘವೇಂದ್ರ ಮತ್ತಿತರರಿದ್ದರು.

Ad Widget

Related posts

ಮಲೆನಾಡಿಗೆ ಜನ ಸಾಗರ, ಜೋಗಕ್ಕೆ ಜೀವಕಳೆ

Malenadu Mirror Desk

ಅಹಮದೀಯ ಸಂಘಟನೆಯಿಂದ ಸ್ವಚ್ಛತೆ, ಅಂಧರ ಶಾಲೆಗೆ ಉಡುಗೊರೆ, ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ

Malenadu Mirror Desk

ಪತ್ರಕರ್ತರಿಗೆ ಲಸಿಕೆ ನೀಡಲು ಆದೇಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.