ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್. ರಘುನಾಥ್ ಅವರನ್ನು ಗೆಲ್ಲಿಸಬೇಕು ಎಂದು ಶಿವಮೊಗ್ಗದ ಅವರ ಗೆಳೆಯರ ಬಳಗ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡ ಎಸ್. ದತ್ತಾತ್ರಿ ಅವರು, ರಘುನಾಥ್ ಎಸ್. ಅವರು ಬ್ರಾಹ್ಮಣ ಮಹಾಸಭಾದ ಬಗ್ಗೆ ಅನೇಕ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಬ್ರಾಹ್ಮಣ ಸಮಾಜದ ಈಗಿನ ಪರಿಸ್ಥಿತಿ ಅಷ್ಟೊಂದು ಸರಿಯಿಲ್ಲ. ಹಣಕಾಸು ವ್ಯವಹಾರದಲ್ಲಿ ಸದೃಢವಾಗಿಲ್ಲ. ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಲ್ಲಿ ಇರುವ ಎರಡು ಆಸ್ತಿಗಳನ್ನು ಬಿಟ್ರೆ ಮತ್ತೇನೂ ಇಲ್ಲ. ಜೊತೆಗೆ ಸಾಲದ ಹೊರೆ ಇದೆ. ವಿಶೇಷ ಸಾಧನೆಯೇನೂ ಮಾಡಿಲ್ಲ. ೪೬ ವರ್ಷಗಳಿಂದ ಬ್ರಾಹ್ಮಣ ಮಹಾಸಭಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.
ಬ್ರಾಹ್ಮಣ ಮಹಾಸಭಾದ ಕಾಯಕಲ್ಪ ಕಲ್ಪಿಸುವ ದೃಷ್ಟಿಯಿಂದ ರಘುನಾಥ್ ಅಂತಹವರು ಅಧ್ಯಕ್ಷರಾಗಿ ಬರಬೇಕಿದೆ. ರಘುನಾಥ್ ಆರ್.ಎಸ್.ಎಸ್. ಮೂಲದವರು, ಬಿಜೆಪಿಯ ಕಾರ್ಯಕರ್ತರು ಕೂಡ, ನೈಸ್ ರಸ್ತೆ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ಒದಗಿಸಿದವರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಶ್ರೇಯೋಭಿವೃದ್ಧಿಗೆ, ಸಮಸ್ಯೆಗಳ ಪರಿಹಾರಕ್ಕಾಗಿ ಡಿ.೧೨ರಂದು ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ರಘುನಾಥ್ ಎಸ್. ಅವರನ್ನು ಗೆಲ್ಲಿಸಬೇಕು ಎಂದರು.
ಮಹಾಸಭಾದ ಅಧ್ಯಕ್ಷ ಚುನಾವಣೆಯಲ್ಲಿ ೪೨ ಸಾವಿರ ಮತದಾರರು ಮತಚಲಾಯಿಸಲಿದ್ದಾರೆ. ಇವರಲ್ಲಿ ಬೆಂಗಳೂರಿನಲ್ಲಿ ೨೭ಸಾವಿರ ಮತದಾರರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಸವನಗುಡಿಯಲ್ಲಿದ್ದಾರೆ. ಮಹಾಸಭಾವನ್ನು ಸದೃಢಗೊಳಿಸಲು, ಕಾಯಕಲ್ಪ ನೀಡಲು ಹಾಗೂ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುವ ರಘುನಾಥ್ ಎಸ್. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ವಿಪ್ರ ಸಂಘಟನೆಗಳ ಮುಖಂಡರಾದ ಸುಬ್ರಹ್ಮಣ್ಯ ಭಟ್, ರಾಘವೇಂದ್ರ ಉಡುಪ, ವಾಮನ ಮೂರ್ತಿ, ಗಣೇಶಭಟ್, ಡಾ.ಗುರುದತ್, ಚಂದ್ರಶೇಖರ್, ಸುಹಾಸ್ ಶಾಸ್ತ್ರಿ, ರಾಜರಾಮ್ ಭಟ್, ಶ್ರೀನಿವಾಸಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.
next post


