Malenadu Mitra
ರಾಜ್ಯಶಿವಮೊಗ್ಗ

ಹರಿಹರಪುರದಲ್ಲಿ ಏ.10 ರಿಂದ ಐತಿಹಾಸಿಕ ಕುಂಭಾಭಿಷೇಕ
ಧಾರ್ಮಿಕ ಸಭೆ, ಹಲವು ಸ್ವಾಮೀಜಿಗಳು ಭಾಗಿ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಶ್ರೀಮಠದಲ್ಲಿ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವ ಏ.10ರಿಂದ 24ರ ವರೆಗೆ ನಡೆಯಲಿದೆ ಎಂದು ಹರಿಹರಪುರ ಮಹಾಕುಂಭಾಭಿಷೇಕ ಸಮಿತಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ವಿ. ವಸಂತಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಏ.10ರಂದು ಶ್ರೀರಾಮ ನವಮಿಯ ದಿನ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಮಹಾಸಂಕಲ್ಪ, ಸಹಸ್ರ ಸಂಖ್ಯೆಯಲ್ಲಿ ಚತುರ್ದ್ರವ್ಯ ಗಣಪತಿ ಹೋಮ, ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ ಹಾಗೂ ಸಂಜೆ 7 ಗಂಟೆಗೆ ಧಾನ್ಯ ಲಕ್ಷ್ಮೀ ಪೂಜೆ ನಡೆಯಲಿದೆ ಎಂದರು.
ಪ್ರತಿದಿನ ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರತಿಷ್ಠಾಂಗಪೂರ್ವ ವಿಧಿಗಳು ಜರುಗಲಿದ್ದು, ಏ.11ರಂದು ನವಗ್ರಹ ಮಹಾಯಾಗ, 12ರಂದು ಲಲಿತಾಹೋಮ ಹಾಗೂ ಗಾಯತ್ರಿ ಮಹಾಯಾಗ, 13ರಂದು ಸುದರ್ಶನ ನಾರಸಿಂಹ ಮಹಾಯಾಗ ಹಾಗೂ ಪೂಜ್ಯಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಅಭಿನವ ರಾಮಾನಂದ ಸರಸ್ವತೀ ಮಹಾಸ್ವಾಮಿಗಳವರ ಜನ್ಮಜಯಂತಿ ಶತಮಾನೋತ್ಸವದ ಕಾರ್ಯಕ್ರಮಗಳು ನಡೆಯಲಿವೆ.
ಏ.14ರಂದು ಗುರು ದತ್ತಾತ್ರೇಯ ಮಹಾಯಾಗ, 15 ರಂದು ವೇದ ಪಾರಾಯಣ ಆರಂಭ, ಬೆಳಗ್ಗೆ 8.20ಕ್ಕೆ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಮತ್ತು ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ಪೂಜ್ಯಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರಿಂದ ಮಹಾಕುಂಭಾಭಿಷೇಕ ನಡೆಯಲಿದೆ.
ಏ.16ರಂದು ಶ್ರೀಲಕ್ಷ್ಮೀ ನರಸಿಂಹ ಮಹಾಯಾಗ, 17 ರಂದು ಲಕ್ಷ ಮೋದಕ ಗಣಪತಿ ಮಹಾಯಾಗ, ಏ. 18 ರಂದು ಮಹಾಮೃತ್ಯುಂಜಯಯಾಗ, ಏ.19 ರಂದು ಶ್ರೀ ಆಂಜನೇಯ ಮಹಾಯಾಗ, 20ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ, ಏ.21ರಂದು ಸಹಸ್ರ ಚಂಡಿಕಾಮಹಾಯಾಗದ ಪಾರಾಯಣ, ಧನ್ವಂತರಿ ಮಹಾಯಾಗ, ಮಧ್ಯಾಹ್ನ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಆರ್.ಎಸ್.ಎಸ್.ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿರಲಿದ್ದಾರೆ ಎಂದರು.
ಪ್ರತಿದಿನ ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭೆ ಹಾಗೂ ಸಂಜೆ 5.30ಕ್ಕೆ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕೊಪ್ಪ ತಾಲೂಕಿನ ಹರಿಹರಪುರ ಕ್ಷೇತ್ರ ಐತಿಹಾಸಿಕ ಸ್ಥಳವಾಗಿದ್ದು, ದಕ್ಷ ಯಜ್ಞ ಇಲ್ಲೇ ನಡೆದಿದೆ ಎಂದು ಪುರಾಣದ ಕತೆಯನ್ನೂ ಹೊಂದಿದೆ. ಇಂತಹ ಕ್ಷೇತ್ರದಲ್ಲಿ ನವೀಕೃತಗೊಂಡ ಶ್ರೀ ನರಸಿಂಹಸ್ವಾಮಿ ದೇವಾಲಯದ ಹಾಗೂ ಶಾರದಾ ಪರಮೇಶ್ವರಿ ದೇವಿ ದೇವಾಲಯಗಳ ಉದ್ಘಾಟನೆ ನಡೆಯಲಿದೆ. ಲಕ್ಷಾಂತರ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಪ್ರತಿದಿನ ಪ್ರಸಾದ ವ್ಯವಸ್ಥೆ ಇರಲಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಆರ್. ಭಾಸ್ಕರ್, ಕೇಶವಮೂರ್ತಿ, ಪ್ರಭಾಕರ್, ಯಜ್ಞನಾರಾಯಣ ಭಟ್, ಶ್ರೀನಿವಾಸ್, ಸುರೇಶ್, ಶ್ರೀಪತಿ, ಗುರುರಾಜ್ ಇದ್ದರು.

ಧಾರ್ಮಿಕ ಸಭೆಗೆ ಸಿಎಂ ಬೊಮ್ಮಾಯಿ


ಏ.22ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿರಲಿದ್ದು, ಮಧ್ಯಾಹ್ನ 12 ಗಂಟೆಗೆ ಸಹಸ್ರ ಚಂಡಿಕಾಮಹಾಯಾಗದ ಪೂರ್ಣಾಹುತಿ ನಡೆಯಲಿದೆ. ಮಠದ ಶ್ರೀಗಳಿಂದ ಆಶೀರ್ವಚನವಿದ್ದು, ಏಪ್ರಿಲ್ 23ರಂದು ರುದ್ರಹೋಮ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. ಏ.24 ರಂದು ಬೆಳಗ್ಗೆ 10 ಗಂಟೆಗೆ ಮಹಾರಥೋತ್ಸವ, ಸಂಜೆ 7 ಗಂಟೆಗೆ ತುಂಗಾ ನದಿಯಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವ ನಡೆಯಲಿದೆ.

Ad Widget

Related posts

ಸಹ್ಯಾದ್ರಿ ಕ್ಯಾಂಪಸ್‍ನಲ್ಲೇ ಖೇಲೋ ಇಂಡಿಯಾ, ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ ಸಂಸದ ರಾಘವೇಂದ್ರ ಅವರ ಮನವರಿಕೆ

Malenadu Mirror Desk

ದೇಶಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಇನ್ವಿಸ್ಟಿಗೇಷನ್ ಯಾವುದು ಗೊತ್ತಾ?
ಇಂಡಿಯಾ ಸೈಬರ್ ಕಾಪ್ ಅವಾರ್ಡ್ ಅಂತಿಮ ಸುತ್ತಿಗೆ ಇನ್ಸ್ ಪೆಕ್ಟರ್ ಗುರುರಾಜ್

Malenadu Mirror Desk

ಲಕ್ಕಿನಕೊಪ್ಪ ಸುತ್ತಮುತ್ತ ಮತ್ತೆ ಕಾಡಾನೆ ಹಾವಳಿ, ಅಪಾರ ಬೆಳೆ ನಷ್ಟ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.