ಶಿವಮೊಗ್ಗ ಶಿಕಾರಿಪುರದ ಸುವ್ವಿ ಪಬ್ಲಿಕೇಷನ್ಸ್, ಕುಂವೀ ಅಭಿಮಾನಿ ಬಳಗ, ಜನಸ್ಪಂದನ ಟ್ರಸ್ಟ್(ರಿ), ಶಿಕಾರಿಪುರ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಸಂಸ್ಥೆಗಳ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ ೦೧ರಂದು ಸಂಜೆ ೫ಕ್ಕೆ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಕುಂವೀ ೭೦ ಕಥೆ ೫೦’ ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ಜ್ಞಾನಾಮೃತ ವಸತಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಎಂ.ಜಿ. ಗೌಡ ಅವರು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|| ಕು. ವೀರಭದ್ರಪ್ಪ ಅವರಿಗೆ ಅಭಿನಂದನೆ ನಡೆಯಲಿದೆ.
ಖ್ಯಾತ ಸಾಹಿತಿ ಡಾ.ನಾ.ಡಿಸೋಜ ಅವರು ಕೃತಿ ಲೋಕಾರ್ಪಣೆಗೊಳಿಸುವರು. ಸಂಸ್ಕೃತಿ ಚಿಂತಕ ಹಾಗೂ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅವರು ಪುಸ್ತಕದ ಕುರಿತು ಮಾತನಾಡುವರು. ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಹಾಫೀಜ್ ಕರ್ನಾಟಕಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ‘ಕುಂವೀ ೭೦ ಕಥೆ ೫೦’ ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ಸುವ್ವಿ ಪಬ್ಲಿಕೇಶನ್ಸ್ನ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್ ಅವರು ಉಪಸ್ಥಿತರಿರುವರು.


