Malenadu Mitra
Uncategorizedರಾಜ್ಯಶಿವಮೊಗ್ಗ

ಹಾಲು ಉತ್ಪಾದಕರ ಬೆನ್ನಿಗೆ ಶಿಮುಲ್ : ಶ್ರೀಪಾದ ನಿಸರಾಣಿ

ಶಿವಮೊಗ್ಗ ಹಾಲು ಒಕ್ಕೂಟದ ವತಿಯಿಂದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಲು ಉತ್ಪಾದಕ ರೈತರಿಗೆ ಅತಿ ಹೆಚ್ಚಿನ ದರವನ್ನು ನೀಡಲಾಗುತ್ತಿದೆ. ಜನವರಿ ೨೧ ರಿಂದ ಅನ್ವಯವಾಗುವಂತೆ ಈ ದರವನ್ನು ೩೧.೮೫ ರೂ ಗೆ ಏರಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಎನ್. ಎಚ್. ಶ್ರೀಪಾದರಾವ್ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ ಅವರು, ಒಕ್ಕೂಟದಿಂದ ಸಂಘಗಳಿಗೆ ಹಾಲಿ ೩೨.೧೫ ರೂ. ನೀಡಲಾಗುತ್ತಿದೆ. ಇದನ್ನು ೩೩.೭೧ ರೂ.ಗೆ ಏರಿಸಲಾಗಿದೆ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ ೩೦.೨೦ ಇದ್ದು, ಅದನ್ನು ೩೧.೮೫ ರೂ. ಗೆ ಹೆಚ್ಚಿಸಲಾಗಿದೆ. ಇದೇ ಸಂದರ್ಭದಲ್ಲಿ ನಂದಿನಿ ಲಸ್ಸಿಯನ್ನೂ ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಶಿಮುಲ್ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇಲ್ಲಿಯವರೆಗೆ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿಲ್ಲ. ಸುಮಾರು ೩ ಕೋಟಿ ರೂ. ನಷ್ಟು ಮೂಲ ಸೌಕರ್‍ಯ ಇಲ್ಲಿದೆ. ಗುಣಮಟ್ಟದ ಹಾಲನ್ನು ನೀಡುವ ಮೂಲಕ ರಾಜ್ಯದಲ್ಲೇ ಅತ್ಯುತ್ತಮ ಡೈರಿ ಎನಿಸಿಕೊಂಡಿದೆ. ಹಾಲು ಮಾರಾಟದಲ್ಲೂ ಸಹ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಲು ಪ್ಯಾಕಿಂಗ್ ಘಟಕಗಳನ್ನು ವಿವಿಧೆಡೆ ಆರಂಭಿಸಲಾಗುವುದು. ಇಲ್ಲಿನ ಹಾಲು ಹೆಚ್ಚಾಗುತ್ತಿದ್ದು, ಅದನ್ನು ಇತರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ ಎಂದರು.
ಹಾಲು ಉತ್ಪಾದಕರಿಗೆ ವಿವಿಧ ಸೌಕರ್‍ಯಗಳನ್ನು ಕಲ್ಪಿಸಲಾಗಿದೆ. ಸುಮಾರು ೨೫ ಸಾವಿರ ಮ್ಯಾಟ್‌ಗಳನ್ನು ಒದಗಿಸಲಾಗಿದೆ. ಹಸು ಸಾಕಾಣಿಕೆಗೆ ನೆರವು ನೀಡಲಾಗುತ್ತಿದೆ. ರೈತರಿಗೆ ಹಸುಗಳ ವೈದ್ಯಕೀಯ ಪರೀಕ್ಷೆಯನ್ನು ಮತ್ತು ಗರ್ಭಧಾರಣೆಯನ್ನು ಸಹ ಶಿಮುಲ್ ವತಿಯಿಂದ ಉಚಿತವಾಗಿ ಮಾಡಿಸಲಾಗುತ್ತಿದೆ. ಕಾಲಾನುಕಾಲಕ್ಕೆ ಎಲ್ಲ ರೀತಿಯ ನೆರವನ್ನು ಒದಗಿಸುವ ಮೂಲಕ ರೈತಸ್ನೇಹಿಯಾಗಿದೆ ಎಂದರು.
೧೦೦ ಅನಲೈಸರ್ ಹೊಸ ಯಂತ್ರಗಳನ್ನು ಸಂಘಗಳಿಗೆ ನೀಡಿದ್ದೇವೆ. ಹೊಸ ಉಪಕರಣ ಕೊಳ್ಳಲು ಸಬ್ಸಿಡಿ ನೀಡುತ್ತೇವೆ. ಮುಖ್ಯವಾಗಿ ದಾವಣಗೆರೆಯಲ್ಲಿ ಸುಮಾರು ೨೦೦ ಕೋಟಿ ರೂ.ವೆಚ್ಚದಲ್ಲಿ ಹಾಲಿನ ಘಟಕ ಸ್ಥಾಪಿಸಲು ಉದ್ದೇಶ ಹೊಂದಲಾಗಿದೆ. ಚಿತ್ರದುರ್ಗದಲ್ಲಿ ಸಹ ಒಂದು ಲಕ್ಷ ಲೀ. ಸಾಮರ್ಥ್ಯದ ಘಟಕವನ್ನು ಸ್ಥಾಪಿಸುತ್ತೇವೆ. ಆದರೆ ಹೊಸ ಒಕ್ಕೂಟ ಮಾಡುವುದಿಲ್ಲ. ಅದರ ಅವಶ್ಯಕತೆ ಇಲ್ಲ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್‍ಯದರ್ಶಿ ಸಂತೋಷ್ ಕಾಚಿಕನಟ್ಟೆ ಉಪಸ್ಥಿತರಿದ್ದರು.

ಬಿಜೆಪಿಯ ಟಿಕೆಟ್ ಆಕಾಂಕ್ಷಿ


ನಾನು ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಹೌದು. ಸಾಗರ ಅಥವಾ ಸೊರಬ ಎರಡೂ ಕ್ಷೇತ್ರದ ಆಕಾಂಕ್ಷಿ. ಯಾವುದೇ ಕ್ಷೇತ್ರದ ಟಿಕೆಟ್ ಕೊಟ್ಟರೂ ಸ್ಪರ್ಧಿಸುತ್ತೇನೆ. ಸಾಗರ ಕ್ಷೇತ್ರದ ಬಹುಭಾಗ ಸೊರಬ ತಾಲೂಕಿನ ಪ್ರದೇಶವಾಗಿರುವುದರಿಂದ ಅಲ್ಲಿಯೂ ಕೆಲಸ ಮಾಡಿದ್ದೇನೆ. ಡಿಸಿಸಿ ಬ್ಯಾಂಕ್ ಮತ್ತು ಶಿಮುಲ್ ಅಧ್ಯಕ್ಷನಾಗಿ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದೇನೆ. ಹಾಲಿನ ಸೊಸೈಟಿಗಳನ್ನು ತೆರೆಯಲು ನೆರವಾಗಿದ್ದೇನೆ. ಜನಪರ ಕೆಲಸಗಳನ್ನು ಎರಡೂ ಕ್ಷೇತ್ರದಲ್ಲಿ ಮಾಡಿರುವುದರಿಂದ ಟಿಕೆಟ್ ಕೇಳಿದ್ದೇನೆ. ಸೊರದಲ್ಲಿ ಬಿಜೆಪಿಯ ಎರಡು ಬಣವಿದೆ. ನೀವು ಯಾವ ಬಣಕ್ಕೆ ಸೇರಿದವರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿಯವನು ಎಂದಷ್ಟೇ ಶ್ರೀಪಾದ ರಾವ್ ಹೇಳಿದರು.

Ad Widget

Related posts

ಹಂದಿ ಅಣ್ಣಿ ಮೇಲೆ ಸೇಡಿದ್ದವರ ಸಿಂಡಿಕೇಟ್ ನಿಂದಲೇ ಕೊಲೆ, ಶತ್ರುವಿನ ಶತ್ರುಗಳೆಲ್ಲ ಒಂದಾಗಿ ಅಟ್ಯಾಕ್ ಮಾಡಿದ್ದಾರೆಂಬುದು ಪೊಲೀಸರ ಅನುಮಾನ

Malenadu Mirror Desk

ಮಲೆನಾಡಲ್ಲಿ ಮಳೆಯ ಸಂಭ್ರಮ, ಜೋಗದಲ್ಲಿ ಜಲ ಚಿತ್ತಾರ, ಪ್ರವಾಸಿಗರ ಹರ್ಷ

Malenadu Mirror Desk

ಬಿಜೆಪಿಯಿಂದ ಶ್ರೀಮಂತರ ಓಲೈಕೆ: ತೀರ್ಥಹಳ್ಳಿಯಲ್ಲಿ ಕಿಮ್ಮ‌ನೆ ರತ್ನಾಕರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.