Malenadu Mitra
ರಾಜ್ಯಶಿವಮೊಗ್ಗ

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ಸರಕಾರ: ಈಶ್ವರಪ್ಪ ಆರೋಪ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಮೋಸದ ಸರ್ಕಾರ. ಗ್ಯಾರಂಟಿಗಳನ್ನು ಘೋಷಿಸಿ ಹಲವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದು ಖಂಡನೀಯ. ಇದರಿಂದ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ. ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತವೆ. ನಿಮ್ಮ ಮನೆಯ ಹೆಣ್ಣು ಮಕ್ಕಳು ಮತಾಂತರಗೊಂಡರೆ ಏನು ಮಾಡುತ್ತೀರಿ. ಕೂಡಲೇ ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಿ ಎಂದರು.
ಬಡ ಜನರಿಗೆ ೧೦ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಇವರು ಗ್ಯಾರಂಟಿ ಕೊಡುವಾಗ ಮೋದಿಯವರನ್ನು ಕೇಳಿದ್ದರೇನು, ಗ್ಯಾರಂಟಿ ಕೊಡಲಾಗದವರು ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದಲ್ಲ. ಹೇಳಿದಂತೆ ಅಕ್ಕಿ ಕೊಡಿ. ಆಗದಿದ್ದರೆ ಅಷ್ಟೇ ಮೊತ್ತದ ಹಣಕೊಡಿ. ಇಲ್ಲದಿದ್ದರೆ ಬಡವರ ಶಾಪ ನಿಮ್ಮನ್ನು ತಟ್ಟದೆ ಬಿಡುವುದಿಲ್ಲ ಎಂದರು.

ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ ಸರ್ಕಾರ ಈಗ ಯದ್ವಾ ತದ್ವಾ ವಿದ್ಯುತ್ ದರ ಏರಿಸಿದೆ. ಇದರಿಂದ ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಸಣ್ಣ ಕೈಗಾರಿಕೆಗಳ ಸಂಘ ಸರ್ಕಾರವನ್ನು ಎಚ್ಚರಿಸಿದೆ ಎಂದ ಅವರು, ಪದವೀಧರರಿಗೂ ಗ್ಯಾರಂಟಿ ನೀಡಿದ ಸರ್ಕಾರ ಈ ವರ್ಷ ಪಾಸಾದವರಿಗೆ ಮಾತ್ರ ಎಂದು ಹೇಳಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಉಚಿತ ಪ್ರಯಾಣದ ಗ್ಯಾರಂಟಿ ಕೂಡ ಹಲವರ ಬದುಕನ್ನು ಕಿತ್ತುಕೊಂಡಿದೆ. ಖಾಸಗಿ ಬಸ್‌ಗಳು , ಆಟೋ ಚಾಲಕರು, ಕ್ಯಾಬ್‌ಗಳು ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರ ಹೊಟ್ಟೆಯ ಮೇಲೆ ಬರೆ ಹಾಕಲಾಗಿದೆ. ಹಾಗೆಯೇ ಮನೆಯ ಯಜಮಾನಿಗೆ ೨ ಸಾವಿರ ಕೊಡುವುದಾಗಿ ಹೇಳಿದ್ದ ಸರ್ಕಾರ ಈಗ ಅದನ್ನು ಮುಂದೆ ಹಾಕಿದೆ. ಅರ್ಜಿ ಹಾಕಲು ಕೂಡ ಇನ್ನೂ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿಯೇ ಜನರು ಗ್ಯಾರಂಟಿಯ ಗೊಂದಲದಲ್ಲಿದ್ದಾರೆ ಎಂದರು.
ಜಿಪಂ, ತಾಪಂ ಲೋಕಸಭಾ ಚುನಾವಣೆಗಳು ಬರುತ್ತವೆ. ಕಾಂಗ್ರೆಸ್ ಬಗ್ಗೆ ಇಟ್ಟ ನಂಬಿಕೆಗಳೆಲ್ಲಾ ಹುಸಿಯಾಗಿವೆ. ಯಾಕಾದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತೋ ಎಂದು ಗೊಣಗುತ್ತಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುತ್ತದೆ. ಕಾಂಗ್ರೆಸ್ ಮತ್ತೆ ಮನೆಗೆ ಹೋಗುತ್ತದೆ ಎಂದರು

ಮಡಿವಾಳ ಸಮಾಜದಿಂದ ಸನ್ಮಾನ
ಶಿವಮೊಗ್ಗ: ಅಖಿಲ ಭಾರತೀಯ ರಜಕ (ದೋಭಿ) ಮಹಾಸಭಾ (ಮಡಿವಾಳ) ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ . ಈಶ್ವರಪ್ಪ ಅವರಿಗೆ ಅವರ ನಿವಾಸದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿಗಳು ಈಶ್ವರಪ್ಪ ಅವರನ್ನು ಅಭಿನಂದಿಸಿ ಮಾತನಾಡಿ, ಈಶ್ವರಪ್ಪ ಅವರು ಕೇವಲ ರಾಜಕಾರಣಿಯಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ಅನನ್ಯ. ಶ್ರೀಗಂಧ ಸಂಸ್ಥೆಯ ಮೂಲಕ ಹಲವು ಆಧ್ಯಾತ್ಮಿಕ ಹಾಗೂ ಸಂಗೀತ ಮತ್ತು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರಿಗೆ ಸದಾ ಒಳಿತಾಗಲಿ ಎಂದು ಹಾರೈಸಿದರು.
ಮಡಿವಾಳ ಮಹಾಸಭಾ ಅಧ್ಯಕ್ಷ ಜೆ. ಎಂಜೇರಪ್ಪ, ಜಂಟಿ ಕಾರ್ಯದರ್ಶಿ ವೈ. ಚಂದ್ರ ಶೇಖರ್, ಜಿಲ್ಲಾಧ್ಯಕ್ಷ ಹೆಚ್. ಸದಾಶಿವಪ್ಪ, ಮಧುಕುಮಾರ್, ಚೌಡಪ್ಪ, ಟಿ. ರಂಗಪ್ಪ, ಹೆಚ್.ಡಿ. ಕುಮಾರ್, ಸಿದ್ದಲಿಂಗಪ್ಪ ಮತ್ತಿತರರಿದ್ದರು.

Ad Widget

Related posts

ಜವಳಿಗೆ ಶೇ. 12ರಷ್ಟು ಜಿಎಸ್‌ಟಿ : ಹೆಚ್ಚಳಕ್ಕೆ ಆಕ್ಷೇಪ ಇನ್-ಅಂಚೆ ಕಾರ್ಡು ಚಳವಳಿ

Malenadu Mirror Desk

ರಾಗಿಗುಡ್ಡ ಗಲಭೆ ಪ್ರಕರಣ ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯ

Malenadu Mirror Desk

ಬಿಜೆಪಿ ಸೇರಿದ ರಾಜು ತಲ್ಲೂರು, ಸೊರಬದಲ್ಲಿ ಕಾಂಗ್ರೆಸ್ ಇಲ್ಲದಂತೆ ಮಾಡ್ತಾರಂತೆ !

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.