ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಭೌತವಿಜ್ಞಾನಿ ಮುಂಬೈನ ಸಿ.ಎಸ್.ಉನ್ನಿಕೃಷ್ಣನ್ ಹಾಗೂ ಯೋಗಗುರು ಭದ್ರಾವತಿಯ ಡಿ.ನಾಗರಾಜ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದ್ದು, ಈ ಮೂಲಕ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಿಶೇಷ ಗೌರವವೊಂದಕ್ಕೆ ಭಾಜನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಎರಡು ಪ್ರಮುಖ ವಿಶ್ವವಿದ್ಯಾಲಯಗಳು ವಿಶೇಷವೆಂಬಂತೆ ಒಂದೇ ದಿನ ಗೌರವ ಡಾಕ್ಟರೇಟ್ ಅನ್ನು ಕಾಗೋಡು ತಿಮ್ಮಪ್ಪನವರಿಗೆ ಘೋಷಿಸಿವೆ.
ರಾಜಕೀಯ ಕ್ಷೇತ್ರದಲ್ಲಿನ ಸಾಧನೆಯನ್ನ ಪರಿಗಣಿಸಿ, ಕಾಗೋಡು ತಿಮ್ಮಪ್ಪರಿಗೆ ಈ ಗೌರವ ನೀಡಲಾಗುತ್ತಿದ್ದು, ಜ.22 ರಂದು ಕುವೆಂಪು ವಿಶ್ವವಿದ್ಯಾಲಯ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಎರಡು ಪ್ರತ್ಯೇಕ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಬೆಳಿಗ್ಗೆ ಕುವೆಂಪು ವಿವಿ ಡಾಕ್ಟರೇಟ್- ಮಧ್ಯಾಹ್ನ ಕೃಷಿ ವಿವಿ ಡಾಕ್ಟರೇಟ್:
ಜ.22ರ ಬೆಳಗ್ಗೆ 10.30ಕ್ಕೆ ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದೆ. ಅಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಭೌತವಿಜ್ಞಾನಿ ಮುಂಬೈನ ಸಿ.ಎಸ್.ಉನ್ನಿಕೃಷ್ಣನ್, ಯೋಗಗುರು ಭದ್ರಾವತಿಯ ಡಿ.ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಇನ್ನು ಅದೇ ದಿನ ಮಧ್ಯಾಹ್ನ 2 ಗಂಟೆಗೆ ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ 9ನೇ ಘಟಿಕೋತ್ಸವ ನಡೆಯಲಿದ್ದು, ಅಲ್ಲಿ ಸಹ ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಈಗಾಗಲೇ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಅವರು ಸಾಗರ ನಗರದಲ್ಲಿರುವ ಕಾಗೋಡು ನಿವಾಸಕ್ಕೆ ಭೇಟಿ ನೀಡಿದ್ದು, ಗೌರವ ಡಾಕ್ಟರೇಟ್ ಸ್ವೀಕರಿಸುವಂತೆ ಆಹ್ವಾನ ನೀಡಿದ್ದಾರೆ.
ಅದೇ ರೀತಿ ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಪ್ರೊ. ಆರ್.ಸಿ.ಜಗದೀಶ್ ನೇತೃತ್ವದಲ್ಲಿ ಕಾಗೋಡು ನಿವಾಸಕ್ಕೆ ಭೇಟಿ ನೀಡಿ, ಗೌರವ ಡಾಕ್ಟರೇಟ್ ಸ್ವೀಕರಿಸಲು ಆಹ್ವಾನ ನೀಡಿದ್ದಾರೆ.


