Malenadu Mitra
ರಾಜ್ಯಶಿವಮೊಗ್ಗ

ತುಂಬಿದ ಭದ್ರೆ, ರೈತರಲ್ಲಿ ಮಂದಹಾಸ ಎಂದ ಸಚಿವರು, ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ : ಕೆ.ಎಸ್.ಈಶ್ವರಪ್ಪ

ನಿಗಧಿತ ಅವಧಿಗೂ ಮುನ್ನವೇ ಭದ್ರಾ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೇಷ್ಮೇ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ಅವರು ಹೇಳಿದರು.
ಅವರು ಭದ್ರಾ ಜಲಾಶಯಕ್ಕೆ ಸ್ಥಳೀಯ ಮುಖಂಡರೊಂದಿಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಿರೀಕ್ಷೆಯಂತೆ ಮಳೆಬಿದ್ದಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಿದ್ದು, ಕೃಷಿಯಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದ ಅವರು ರಾಜ್ಯದ ಕೆಲ ಪ್ರದೇಶಗಳಲ್ಲಿ ಅತೀವೃಷ್ಠಿಯಾಗಿದ್ದು, ಬೆಳೆಹಾನಿ, ಜನ-ಜಾನುವಾರು ಹಾನಿಗಳ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ೫.೦೦ಲಕ್ಷ ಹೆಕ್ಟೇರ್ ಭೂಪ್ರದೇಶವಿದ್ದು, ಪ್ರಸ್ತುತ ೨.೫೦ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರುದೊಗಿಸಲಾಗುತ್ತಿದೆ. ಉಳಿದ ಪ್ರದೇಶಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ನೆರವಿನಿಂದ ನೀರನ್ನು ಒದಗಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದ್ದು, ಕಾiಗಾರಿಗಳು ಆರಂಭಗೊಂಡಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಮೇಯರ್ ಸುನಿತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾರಾಮಯ್ಯ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ವೀರಭದ್ರಪ್ಪ, ರಿಜಿಸ್ಟ್ರಾರ್ ಅನುರಾಧ ಜಿ. ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವಿವಿಧ ಶ್ರೇಣಿಯ ಅಭಿಯಂತರರು, ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂಧಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ : ಕೆ.ಎಸ್.ಈಶ್ವರಪ್ಪ


ಸಂಘ ಪರಿವಾರದ ಬಿಕ್ಕಟ್ಟು ಗಲಭೆಗೆ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ, ಮರ್ಯಾದೆ ಇದೆಯೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಪಾಕಿಸ್ತಾನ ಮಾಡಿದ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು. ಮತ್ತೆ ಪಾಕಿಸ್ತಾನ ಭಾರತದ ಸುದ್ದಿಗೆ ಬರದಂತೆ ಮಾಡಿದ್ದು ಸಂಘ ಪರಿವಾರದ ನರೇಂದ್ರ ಮೋದಿ. ದೇಶದ ಮೇಲೆ ದಾಳಿಗಳಾದಾಗ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿವಾರದ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಘ ಪರಿವಾರದ ಸ್ವಯಂ ಸೇವಕರ ಬಗ್ಗೆ ಸ್ವಲ್ಪವು ತಿಳಿದಿಲ್ಲ. ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು, ಅವರ ಪಕ್ಷವನ್ನು ಸೋಲಿಸಿದ್ದು ಎಂದು ಟಾಂಗ್ ನೀಡಿದರು.
ದೇಶದ ಆಶಾಕಿರಣ ಆರ್‌ಎಸ್‌ಎಸ್. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಜೊತೆಗೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕು. ಆರ್‌ಎಸ್‌ಎಸ್ ಶಾಖೆಗೆ ಎರಡು ದಿನ ಬಂದು ಅಲ್ಲಿನ ಬಗ್ಗೆ ತಿಳಿದುಕೊಂಡರೆ ನಾಲಿಗೆ ಇಷ್ಟು ಉದ್ದ ಬಿಡುವುದಿಲ್ಲ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಅವರು ತಮ್ಮ ನಾಲಿಗೆಯನ್ನು ತೊಳೆದುಕೊಳ್ಳಲಿ. ಸಿದ್ದರಾಮಯ್ಯ ಬಂದರೆ ನಾನೇ ಆರ್‌ಎಸ್‌ಎಸ್ ಶಾಖೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಎನ್.ನಾಗರಾಜ್,ಅಣ್ಣಪ್ಪ,ವಿನ್ಸೆಂಟ್ ರೋಡ್ರಿಗಸ್ ಮೊದಲಾದವರಿದ್ದರು.

ಎನ್‌ಕೌಂಟರ್‌ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ :ಗೃಹ ಸಚಿವ ಅರಗ ಜ್ಞಾನೇಂದ್ರ


ಎನ್‌ಕೌಂಟರ್‌ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ. ಮಂಗಳೂರು ಇದೀಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಎನ್‌ಕೌಂಟರ್‌ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ. ಘಟನೆ ನಡೆಸಿದಾಗ ಹೀಗೆನ್ನಿಸುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ಫಾಸ್ಟ್ ಟ್ರಾಕ್ ಕೋರ್ಟ್ ಗೆ ಮನವಿ ಮಾಡುತ್ತಿದ್ದೇವೆ. ಬಿಸಿ ಇದ್ದಾಗಲೇ ತಟ್ಟಿದರೆ ಮುಂದೆ ಈ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆ ಎಂದರು.
ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುತ್ತಾರೆ ಎಂದಲ್ಲ. ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಹಾಗೇ ಆಕ್ರೋಶ ಎಂದು ಹೇಳಿದರು.
ಸೈದಾಂತಿಕವಾಗಿ ನಾವೆಲ್ಲ ಒಂದಾಗಿಯೇ ಇದ್ದೇವೆ. ಇಂದು ನಮ್ಮ ಮನೆ ಬಳಿ ಬಂದು ಎಬಿವಿಪಿಯವರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತಹ ಕಾರ್ಯಕರ್ತರಿಲ್ಲ. ಒಬ್ಬ ಕಾರ್ಯಕರ್ತರಾಗಿ ಬೆಳೆಯಲು ಸಾಕಷ್ಟು ವರ್ಷ ಬೇಕು. ಬಡವನಾದರೂ ಆತನ ಪಕ್ಷಕ್ಕೆ ಹಾಗೂ ಸಂಘಟನೆಗೆ ಒತ್ತು ನೀಡುತ್ತಾನೆ. ಇಂತಹ ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಹಾಗೇ ಆಕ್ರೋಶ ಎಂದರು.

Ad Widget

Related posts

ವಸತಿ ಯೋಜನೆಗಳ ಪೂರ್ಣಗೊಳಿಸಲು ಆರ್ಥಿಕ ನೆರವು: ಸಚಿವ ವಿ.ಸೋಮಣ್ಣ

Malenadu Mirror Desk

ಶಾಸಕ ಹಾಲಪ್ಪ ಪುತ್ರಿ ವಿವಾಹ, ವಧುವರರನ್ನು ಹರಸಿದ ಮುಖ್ಯಮಂತ್ರಿ

Malenadu Mirror Desk

ಮುಂದಿನ ಮಾರ್ಚ್ ಒಳಗಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಚಿದಾನಂದ ವಟಾರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.