Malenadu Mitra
ರಾಜ್ಯಶಿವಮೊಗ್ಗ

ಚಿತ್ರಕಾರನ ರೇಖೆ ಅಳಿಸಿದ ಕ್ರೂರ ಕೊರೊನ, ಅಪ್ಪ ಅಗಲಿದ ವಾರದೊಳಗೇ ಮಗನನ್ನೂ ಕರೆದೊಯ್ದ ಮೃತ್ಯು

ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಶಿಕ್ಷಕ ಗಂಗಾಧರ್ ಅಡ್ಡೇರಿ(43) ನಿಧನರಾಗಿದ್ದಾರೆ. ಕಳೆದ ತಿಂಗಳು ಕೊರೊನ ಸೋಂಕಿಗೆ ತುತ್ತಾಗಿದ್ದ ಅವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಷಿಜನ್‍ನಲ್ಲಿಯೇ ಇದ್ದ ಅವರ ಆರೋಗ್ಯ ಚೇತರಿಕೆ ಕಂಡಿತ್ತಾದರೂ ಸೋಮವಾರ ಹಠಾತ್ತನೇ ಆಕ್ಸಿಜನ್ ಲೆವೆಲ್ ಕಡಿಮೆಯಾಗಿತ್ತು. ಅವರ ಬಂಧುಗಳು ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರೂ, ಸಕಾಲದಲ್ಲಿ ವೆಂಟಿಲೇಟರ್ ಸಿಗದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ.
ಕೊನೇ ಕ್ಷಣದಲ್ಲಿ ವೆಂಟಿಲೇಟರ್ ವ್ಯವಸ್ಥೆ ಆಯಿತಾದರೂ, ಅದಕ್ಕೆ ಶಿಫ್ಟ್ ಮಾಡುವ ಮುನ್ನವೇ ಗಂಗಾಧರ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಸಹೋದರ ಇದ್ದಾರೆ. ರಿಪ್ಪನ್‍ಪೇಟೆ ಸಮೀಪದ ಅಡ್ಡೇರಿ ಗ್ರಾಮದವರಾದ ಗಂಗಾಧರ್ ಬೆಂಗಳೂರಿನಲ್ಲಿ ಸರಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದರು. ಜನತಾ ಕಫ್ರ್ಯೂ ಘೋಷಣೆಯಾಗುತ್ತಿದ್ದಂತೆ ಶಿವಮೊಗ್ಗಕ್ಕೆ ಬಂದಿದ್ದರು. ಅಲ್ಲಿಯೇ ಅವರಿಗೆ ಕೊರೊನ ಸೋಂಕು ತಗಲಿತ್ತು ಎನ್ನಲಾಗಿದೆ.
ನಾಡಿನ ಎಲ್ಲಾ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅವರ ವ್ಯಂಗ್ಯ ಚಿತ್ರಗಳು ಪ್ರಕಟವಾಗಿದ್ದವು. ತಮ್ಮ ಕಲಾವಂತಿಕೆಗೆ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದ ಗಂಗಾಧರ್ ಅವರ, ವ್ಯಂಗ್ಯಚಿತ್ರಗಳ ಪ್ರದರ್ಶನ ಹಲವು ಕಡೆದ ನಡೆದಿದ್ದವು.

ಅಪ್ಪ ಸತ್ತು ವಾರವಾಗಿಲ್ಲ

ಅರಣ್ಯ ಇಲಾಖೆ ನಿವೃತ್ತ ನೌಕರರಾಗಿದ್ದ ಗಂಗಾಧರ್ ತಂದೆ ಕಟ್ಟ ಈಶ್ವರಪ್ಪ ಏ.14 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೃದಯ ಸಂಬಂಧಿ ತೊಂದರೆ ಇದ್ದ ಅವರಿಗೂ ಕೊರೊನ ಕಾರಣಕ್ಕೆ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಬಂದ ಮರುದಿನವೇ ಅವರು ನಿಧನರಾಗಿದ್ದರು.

ಅಪ್ಪನ ಸಾವಿನ ಸುದ್ದಿ ಹೇಳಿರಲಿಲ್ಲ

ಅಪ್ಪ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದ್ದು, ಗಂಗಾಧರ್‍ಗೆ ಗೊತ್ತಿತ್ತು ಆದರೆ ಅವರು ನಿಧನರಾದ ವಿಷಯವನ್ನು ತಿಳಿಸಿರಲಿಲ್ಲ. ತೀವ್ರ ಸುಸ್ತಾಗಿದ್ದ ಗಂಗಾಧರ್ ಅವರಿಗೆ ಉಸಿರಾಟದ ತೊಂದರೆ ಇತ್ತು. ಅಪ್ಪನ ಬಗ್ಗೆ ವಿಚಾರಿಸಿದ ಅವರಿಗೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸುಳ್ಳು ಹೇಳಲಾಗಿತ್ತು. ಮಗನನ್ನು ಉಳಿಸಿಕೊಳ್ಳಲು ಈ ರೀತಿ ಹೇಳಲಾಗಿತ್ತು. ಆದರೆ ಕ್ರೂರ ವಿದಿ ಮಗನನ್ನು ಅಪ್ಪನಲ್ಲಿಗೇ ಕರೆದೊಯ್ದುಬಿಟ್ಟಿತು. ವಾರದಲ್ಲಿ ಕುಟುಂಬದ ಇಬ್ಬರನ್ನು ಕಳೆದುಕೊಂಡ ಕುಟುಂಬದ ದುಃಖ ಹೇಳತೀರದಾಗಿದೆ.
ಸಂತಾಪ: ವ್ಯಂಗ್ಯಚಿತ್ರಕಾರ ಹಾಗೂ ಶಿಕ್ಷಕ ಗಂಗಾಧರ್ ನಿಧನಕ್ಕೆ ಮಲೆನಾಡು ಮಿರರ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಾಗೃತಿ ಮೂಡಿಸಿದ ಹೃದಯವಂತನೇ ಇನ್ನಿಲ್ಲ
Ad Widget

Related posts

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ : ಕೆ.ಎಸ್.ಈಶ್ವರಪ್ಪ

Malenadu Mirror Desk

ಪತ್ರಿಕೆ ಓದುವುದರಿಂದ ಜ್ಞಾನದ ದಾಹ ನೀಗುವುದು : ತಹಸೀಲ್ದಾರ್ ಹುಸೇನ್, ಸೊರಬ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ

Malenadu Mirror Desk

ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಜಿಲ್ಲಾಧಿಕಾರಿ ಆದೇಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.