Malenadu Mitra
ರಾಜ್ಯಶಿವಮೊಗ್ಗ

ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಸಚಿವ ಈಶ್ವರಪ್ಪ:ಕೆಬಿಪಿ ಆರೋಪ

ಶಿವಮೊಗ್ಗ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಸುಳ್ಳು ಮಾಹಿತಿಯನ್ನು ನೀಡುತ್ತ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸಮೀಪದ ಹೊಸೂಡಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ ನಡೆದಿದ್ದು, ಸಭೆಯಲ್ಲಿ ಪಿಡಿಒ ಅವರು ಕೊರೋನಾ ನಿಯಂತ್ರಣಕ್ಕೆ ಮನೆಮನೆಗೆ ತೆರಳಿ ಸನಿಟೈಸೇಶನ್ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಗ್ರಾಮದ ಮಹಿಳೆ ಮೀನಮ್ಮ ಎಂಬುವವರು ಅಧಿಕಾರಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಚಿವರ ಎದುರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸಚಿವರ ಎದುರೇ ಪಿಡಿಒ ರನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯನ್ನು ಸಚಿವರು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು, ಸಚಿವರ ಮಾತಿಗೆ ಬಗ್ಗದ ಮಹಿಳೆಯನ್ನು ಪೊಲೀಸರ ನೆರವಿನಿಂದ ಸಭೆಯಿಂದಲೇ ಹೊರಹಾಕುವ ಮೂಲಕ ನ್ಯಾಯ ಕೇಳುವುದೇ ತಪ್ಪು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಕೊರೋನಾ ಸಂಕಷ್ಟದಿಂದಾಗಿ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ, ಸಚಿವರುಗಳು ಜನರ ಪರವಾಗಿ ಕೆಲಸ ಮಾಡಬೇಕು. ಅಲ್ಲದೆ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಹೇಳಬೇಕು. ಅದನ್ನು ಬಿಟ್ಟು ಮತ ನೀಡಿದ ಜನರನ್ನೇ ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಕೂಡ ಸಚಿವರಾದಂತಹ ಕೆ.ಎಸ್. ಈಶ್ವರಪ್ಪ ಅವರು ಕಾರಟಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಳ್ಳಿನ ಪಾಠ ಬೋಧನೆ ಮಾಡಿದ್ದರು. ರಾಜಕಾರಣಿಯಾದವರು ಜನರ ಬಳಿ ಮಾತನಾಡುವಾಗ ತಮಗೆ ಏನು ಗೊತ್ತಿಲ್ಲ ಅಂದುಕೊಳ್ಳಬಾರದು. ಒಂದು ವೇಳೆ ವಿಷಯ ಗೊತ್ತಿಲ್ಲದಿದ್ದರೂ ಸುಳ್ಳುಪಳ್ಳು ಹೇಳಿ ಅಲ್ಲಿಂದ ಬಂದು ಬಿಡಬೇಕು ಎಂದು ಕಾರ್ಯಕರ್ತರಿಗೆ ಸುಳ್ಳಿನ ಪಾಠ ಬೋಧನೆ ಮಾಡುವುದರ ಮೂಲಕ ಬಿಜೆಪಿ ಸಂಸ್ಕೃತಿ ಏನೆಂಬುದನ್ನು ಸಾರಿ ಹೇಳಿದ್ದಾರೆ ಎಂದು ಕೆ.ಬಿ. ಪ್ರಸನ್ನ ಕುಮಾರ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಹಾಗೂ ಸಚಿವರುಗಳು ಇಂತಹ ದುಸ್ಥಿತಿಗೆ ಇಳಿಯಬಾರದಿತ್ತು. ಕಾರಟಗಿಯಲ್ಲಿ ಸಚಿವರೇ ಸುಳ್ಳಿನ ಪಾಠ ಬೋಧನೆ ಮಾಡಿದ್ದರೆ, ಹೊಸೂಡಿ ಗ್ರಾಮ ಪಂಚಾಯತ್ ಸಭೆಯಲ್ಲಿ ಅಧಿಕಾರಿಗಳಿಂದಲೇ ಸುಳ್ಳು ಹೇಳಿಸಿದ್ದಾರೆ. ಆ ಮೂಲಕ ಸುಳ್ಳಿನ ಸರದಾರ ತಾವು ಎಂಬುದನ್ನು ಕೆ.ಎಸ್. ಈಶ್ವರಪ್ಪ ರವರು ಸಾಬೀತುಪಡಿಸಿದ್ದಾರೆ ಎಂದು ಕೆಬಿ ಪ್ರಸನ್ನ ಕುಮಾರ್ ಲೇವಡಿ ಮಾಡಿದ್ದಾರೆ.

ಸಚಿವರಾದಂತಹ ಕೆ.ಎಸ್. ಈಶ್ವರಪ್ಪ ರವರೇ ಸೋಲಿನ ಪಾಠ ಬೋಧನೆ ಮಾಡುತ್ತಿರುವುದರಿಂದ ಜನರು ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು. ಹೀಗಾಗಿ ಜಿಲ್ಲಾಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಬೇಕು. ಸುಳ್ಳು ಮಾಹಿತಿ ನೀಡುವ ಸರ್ಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆ.ಬಿ. ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.

Ad Widget

Related posts

ಕೋವಿಡ್ ಮುಂಜಾಗರೂಕತೆಯೊಂದಿಗೆ ವೈಭವದ ದಸರಾ ಆಚರಣೆಗೆ ಸಿದ್ಧತೆ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

‘ಮಲೆನಾಡಿಗರ ಶೋಷಣೆ ವಿರುದ್ಧ ಸತ್ಯಾಗ್ರಹ’ : ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ.

Malenadu Mirror Desk

ಜನಮನ ಸೆಳೆದ ಶಿವಮೊಗ್ಗ ದಸರಾ, ಕೊರೊನ ಆತಂಕದ ನಡುವೆಯೂ ಜನಸ್ಪಂದನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.