ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅಚ್ಛೆ ದಿನದ ಘೋಷಣೆಯಾಗಿತ್ತು ಆದರೆ ಅದು ಇಂದು ಕೊಚ್ಚೆ ದಿನವಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಾಮಾನ್ಯ ಜನರು ನೆಮ್ಮದಿಯಾಗಿಲ್ಲ. ಮಾನವೀಯತಯೇ ಸರ್ಕಾರಕ್ಕಿಲ್ಲ ಆಳುವ ಸರ್ಕಾರಗಳು ಕಣ್ಮುಚ್ಚಿಕೊಂಡು ಕುಳಿತಿವೆ. ಬೆಲೆ ಏರಿಕೆಯ ಬಿಸಿ ಬಡವರನ್ನು ಹೈರಾಣ ಮಾಡಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ ಎಂದು ದೂರಿದರು.
ಗ್ಯಾಸ್ ಬೆಲೆ, ತೈಲಬೆಲೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಷ್ಟಾದರೂ ಮೋದಿ ಭಕ್ತರು ದೇಶಕ್ಕಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ದೇಶ ಭಕ್ತರಿಗಾಗಿಯೇ ಪ್ರತ್ಯೇಕ ಗ್ಯಾಸ್, ಪೆಟ್ರೋಲ್ ಬೆಲೆ ಏರಿಸಲಿ. ಜನ ಸಾಮಾನ್ಯರಿಗೆ ಬಡವರಿಗೆ ಬಿಪಿಎಲ್ ಕಾರ್ಡುಗಳ ಮೂಲಕ ಸಬ್ಸಿಡಿ ನೀಡಲಿ ಆಗ ಗೊತ್ತಾಗುತ್ತದೆ. ದೇಶ ಭಕ್ತ ಯಾರು ಎಂದು ವ್ಯಂಗ್ಯವಾಡಿದರು.
ಹುಣಸೋಡು ಘಟನೆ ತನಿಖೆಯಾಗಲಿ:
ಶಿವಮೊಗ್ಗದಲ್ಲಿ ೬ ಜನರ ಸಾವಿಗೆ ಕಾರಣವಾದ ಹುಣಸೋಡು ಸ್ಪೋಟ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದರ ಹಿಂದೆ ಬಿಜೆಪಿ ರಾಜಕಾರಣಿಗಳ ಕೈವಾಡವಿದೆ ಇದಕ್ಕೆ ಸಂಬಂದಿಸಿದಂತೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಇಲಾಖೆಗಳ ಅಕಾರಿಗಳಿಗೆ ಕಣ್ಣುಮುಚ್ಚಿ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದ್ದರು. ಇದನ್ನು ನೋಡಿದರೆ ಸರಿಯಾಗಿ ತನಿಖೆ ನಡೆಯುವ ಭರವಸೆ ಇಲ್ಲ ಎಂದರು.
ಪ್ರಗತಿಪರ ಚಿಂತಕ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದನ್ನು ವಿರೋಸಿದ ಅವರು ಒಬ್ಬ ವಕೀಲೆ ಈ ರೀತಿ ಮಾಡಿರುವುದು ತಪ್ಪು. ಇದು ಭಾರತೀಯ ಸಂಸ್ಕೃತಿ ಅಲ್ಲ. ಇದರ ಹಿಂದೆ ಪ್ರಚಾರದ ಉದ್ದೇಶ ಬಿಟ್ಟರೆ ಬೇರೆ ಏನೂ ಇಲ್ಲ. ಅವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಪ್ರೀತಿ ಇದ್ದರೆ ಅತ್ಯಾಚಾರ, ದುರ್ಬಲ ಮಹಿಳೆಯರ ಪರವಾಗಿ ಹೋರಾಟ ಮಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಬಿ. ಕವಿತಾ, ವಿಜಯಲಕ್ಷ್ಮೀ ಪಾಟೀಲ್, ಸೌಗಂದಿಕ, ಫರಿದಾಖಾನಂ, ಗೌಸಿಯಾ ವಾಜಿಯ, ರೇಷ್ಮ, ಸುವರ್ಣನಾಗರಾಜ್, ಸ್ಟೆಲ್ಲಾ ಮತ್ತಿತರರಿದ್ದರು.
previous post
next post


