Malenadu Mirror
ಮನರಂಜನೆ ರಾಜ್ಯ ಶಿವಮೊಗ್ಗ

ಜುಲೈ 1 ರಂದು ವಿಂಡೋಸೀಟ್ ಬಿಡುಗಡೆ, ಮಲೆನಾಡಿನಲ್ಲಿಯೇ ಹೆಚ್ಚು ಚಿತ್ರೀಕರಣ: ನಿರ್ದೇಶಕಿ ಶೀತಲ್ ಶೆಟ್ಟಿ

ಕೌತುಕದ ಜತೆಗೆ ಪ್ರೇಮದ ಹಂದರವಿರುವ ‘ವಿಂಡೋಸೀಟ್’ ಕನ್ನಡ ಚಲನಚಿತ್ರ ಜುಲೈ ೧ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
ಶಿವಮೊಗ್ಗ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದ ತಾವು ನಿರ್ದೇಶನದತ್ತ ಸಾಗಿದ್ದು, ಇದಕ್ಕೆ ಪೂರಕವಾಗಿ ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಹೀಗೆ ಚಿಕ್ಕ ಅನುಭವ ಮತ್ತು ಆಸಕ್ತಿಯಿಂದಾಗಿ ವಿಂಡೋಸೀಟ್ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರೇಕ್ಷಕರ ಅಗತ್ಯಗನಗುಣವಾಗಿ ಎಲ್ಲ ವಿಷಯಗಳತ್ತ ಗಮನ ಹರಿಸಿ ಕಲಿತು ಈ ಚಿತ್ರದ ನಿರ್ದೇಶನವನ್ನು ಮಾಡಿದ್ದೇನೆ. ಇದು ನನ್ನ ಪ್ರಥಮ ನಿರ್ದೇಶನದ ಚಿತ್ರ ಎಂದರು.
ವಿಂಡೋಸೀಟ್ ಚಿತ್ರದಲ್ಲಿ ನಾಯಕನಟನಾಗಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ, ನಾಯಕಿಯರಾಗಿ ಅಮೃತ್ ಅಯ್ಯಂಗಾರ್ ಮತ್ತು ಸಂಜನಾ ಆನಂದ್, ಮುಖ್ಯ ಕಲಾವಿದರಾಗಿ ರವಿಶಂಕರ್, ಮಧುಸೂದನರಾವ್, ರೇಖಾ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ಅಭಿನಯಿಸಿದ್ದಾರೆ. ಪಾತ್ರಗಳನ್ನು ವಿಮರ್ಶೆ ಮಾಡಿ ಆಯ್ಕೆ ಮಾಡುವ ನಿರೂಪ್ ಭಂಡಾರಿ ನಾನು ಕತೆ ಮತ್ತು ಸಿನೆಮಾ ಥೀಮ್ ಹೇಳುತ್ತಿದ್ದಂತೆ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಚಿತ್ರದ ನಿರ್ಮಾಣವನ್ನು ಮಂಜುನಾಥಗೌಡ ಅವರು ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದಾರೆ, ವಿಘ್ನೇಶ್ ರಾಜ್ ಛಾಯಾಗ್ರಹಣ ಒಗಿಸಿದ್ದು, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತೆ ರಚನೆ ಮಾಡಿದ್ದಾರೆ. ಹಾಡುಗಳು ಕೂಡ ಇಂಪಾಗಿವೆ ಎಂದರು.
ಸಾಗರ ಸುತ್ತಮುತ್ತ ಚಿತ್ರೀಕರಣ:
ನಾನು ಶಿವಮೊಗ್ಗದವಳೆ. ಶಿವಮೊಗ್ಗ ಸಮೀಪದ ಆಯನೂರು ನಮ್ಮೂರು. ಹಾಗಾಗಿ ಈ ಜಿಲ್ಲೆಯ ಬಗ್ಗೆ ನನಗೆ ಸಾಕಷ್ಟು ಹೆಮ್ಮೆ ಇದೆ. ತಾಳಗುಪ್ಪ ಮತ್ತು ಸಾಗರ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದೇವೆ. ಮಲೆನಾಡಿನ ಪೃಕೃತಿ ಸೊಬಗು ಚಿತ್ರದಲ್ಲಿ ಚೇತೋಹಾರಿಯಾಗಿದೆ. ಶಿವಮೊಗ್ಗದ ಜನತೆ ಇದನ್ನು ತುಂಬಾ ಇಷ್ಟ ಪಡುತ್ತಾರೆ ಎಂಬ ದೃಢ ವಿಶ್ವಾಸ ನನಗಿದೆ. ಪ್ರೇಕ್ಷಕರು ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದ ಅವರು ಮನವಿ ಮಾಡಿದರು.
ನಾಯಕ ರಘು ಈ ಚಿತ್ರದಲ್ಲಿ ಒಬ್ಬ ಹಾಡುಗಾರ. ಅವನು ತನ್ನ ದೈನಂದಿನ ಪ್ರಯಾಣದಲ್ಲಿ ರೈಲಿನ ವಿಂಡೋ ಸೀಟ್ ಅಂದರೆ ಕಿಟಕಿಯ ಪಕ್ಕ ಕುಳಿತುಕೊಳ್ಳುತ್ತಿರುತ್ತಾನೆ. ಒಂದು ನಿರ್ದಿಷ್ಟ ಕಾರಣಕ್ಕಾಗಿ ಅವನಲ್ಲಿ ಪ್ರೀತಿ ಅಂಕುರವಾಗುತ್ತದೆ. ಅಲ್ಲಿ ಅವನು ತನ್ನ ಪ್ರೀತಿ ಜೊತೆಗೆ ಜೀವನವನ್ನು ಬದಲಾಯಿಸುವ ಸಂಗತಿಗಳೊಂದಿಗೆ ಮುಖಾಮುಖಿಯಾಗುತ್ತಾನೆ. ಅನೇಕ ಏಳುಬೀಳುಗಳು ಉಂಟಾಗುತ್ತವೆ. ಕಟ್ಟುಪಾಡುಗಳು ಎದುರಾಗುತ್ತವೆ. ಇವೆಲ್ಲವೂ ವಿಂಡೋಸೀಟಿನ ಎದುರಿನ ವಾಸ್ತವದ ಬದುಕಿನೊಂದಿಗೆ ಬೆಸೆದುಕೊಳ್ಳುತ್ತವೆ. ಅವನು ಸರಪಳಿಗಳ ಸುಳಿಗೆ ಬೀಳುತ್ತಾನೋ ಅಥವಾ ಇಲ್ಲವೇ ಎಂಬುದೇ ಕಥೆಯ ಹಂದರವಾಗಿದೆ ಎಂದು ಶೀತಲ್ ಶೇಟ್ಟಿ ಹೇಳಿದರು.
ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, ಚಿತ್ರದ ಕತೆ ತುಂಬಾ ಚೆನ್ನಾಗಿದೆ. ಪಾತ್ರಗಳ ಆಯ್ಕೆ ವಿಚಾರದಲ್ಲಿ ನಾನು ಒಂದು ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದು, ಕತೆ ಹೇಳುತ್ತಿದ್ದಂತೆ ಪಾತ್ರ ಇಷ್ಟವಾಯಿತು ಎಂದು ಹೇಳಿದರು.
ನಾಯಕಿ ಅಮೃತ್ ಅಯ್ಯಂಗಾರ್ ಮಾತನಾಡಿ, ಚಿತ್ರ ಜನರ ಮನಸ್ಸು ಗೆಲ್ಲುವ ವಿಶ್ವಾಸವಿದೆ. ಪ್ರೇಕ್ಷರು ನೋಡಿ ಬೆಂಬಲಿಸಿ ಎಂದು ಮನವಿ ಮಾಡಿದರು.

ತಾಳಗುಪ್ಪ ಮತ್ತು ಸಾಗರ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದೇವೆ. ಮಲೆನಾಡಿನ ಪೃಕೃತಿ ಸೊಬಗು ಚಿತ್ರದಲ್ಲಿ ಚೇತೋಹಾರಿಯಾಗಿದೆ. ಶಿವಮೊಗ್ಗದ ಜನತೆ ಇದನ್ನು ತುಂಬಾ ಇಷ್ಟ ಪಡುತ್ತಾರೆ ಎಂಬ ದೃಢ ವಿಶ್ವಾಸ ನನಗಿದೆ

ಶೀತಲ್ ಶೆಟ್ಟಿ ,ನಿರ್ದೇಶಕಿ

Ad Widget

Related posts

ಸಾವಿರ ದಾಟಿದ ಸೋಂಕು,10 ಸಾವು

Malenadu Mirror Desk

ನಗರ ಸರ್ವತೋಮುಖ ಅಭಿವೃದ್ಧಿಯಾಗಬೇಕು , ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಆಗ್ರಹ

Malenadu Mirror Desk

ತವರು ನೆಲದ ಋಣ ತೀರಿಸುವೆ: ಬಿಎಸ್‌ವೈ ಭಾವುಕ ನುಡಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.