ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಹೋಬಳಿಯ ನೇಗಿಲೋನಿ ಗ್ರಾಮದ ಅಂಬರೀಷ್ ಎನ್ನುವ ವ್ಯಕ್ತಿ ಗನ್ ಶಾಟ್ ನಿಂದಾಗಿ ಕೊಲೆಯಾಗಿದ್ದು, ಘಟನೆ ನಡೆದು ೨೬ ದಿನವಾದರೂ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ರಾಜ್ಯ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೀರ್ತಿ ಎನ್ನುವ ವ್ಯಕ್ತಿ ಆಗಸ್ಟ್ ೨೬ ರ ಸಂಜೆಯ ವೇಳೆಗೆ ಮೃತ ಅಂಬರೀಷನನ್ನು ಜೊತೆಯಲ್ಲಿ ಕರೆದುಕೊಂದು ಹೋಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಒಂದು ದಿನವಾದರೂ ಅಂಬರೀಷ್ ಮನೆಗೆ ಹಿಂದಿರುಗದಿದ್ದಾಗ ಗಾಬರಿಗೊಂಡ ಮನೆಯವರು ಹುಡುಕಿದ ಸಂದರ್ಭದಲ್ಲಿ ಮಾರನೇ ದಿನ ಮಧ್ಯಾಹ್ನ ಮೃತನ ದೇಹ ಪತ್ತೆಯಾಗಿದೆ.
ಈ ಘಟನೆಯ ಬಗ್ಗೆ ಪೊಲೀಸರಿಗೂ, ಡಿವೈಎಸ್ಪಿಗೂ ಹಾಗೂ ಗೃಹ ಸಚಿವ ಆರಗಜ್ಞಾನೇಂದ್ರ ಇವರಿಗೂ ಮಾಹಿತಿ ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ವಿಶೇಷವೆಂದರೆ ಕುಟುಂಬದವರು ಯಾವುದೇ ರೀತಿಯ ದೂರನ್ನು ಪೋಲಿಸರಿಗೆ ನೀಡದಿದ್ದರೂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮಕ್ಕೆ ಮುಂದಾಗದೇ ಕೈಚೆಲ್ಲಿದ್ದಾರೆ. ಕೊಲೆ ಮಾಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು, ಯಾವುದೇ ಕ್ರಮಕ್ಕೆ ಕೈಗೊಳ್ಳದಂತೆ ಗೃಹಸಚಿವರು ತಮ್ಮ ಪ್ರಭಾವವನ್ನು ಬೀರಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೊಲೆ ಆರೋಪಿ ಉಪಯೋಗಿಸಿರುವ ಬಂದೂಕು ನಾಗರಾಜ್ ಎಂಬುವವರದಾಗಿದ್ದು, ಸದ್ಯ ನಾಗರಾಜ್ ಮತ್ತು ಕೀರ್ತಿ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಅಲ್ಲದೇ ಈ ಕೇಸನ್ನು ಮುಚ್ಚಿಹಾಕಲು ಪೊಲೀಸರ ಸಮ್ಮುಖದಲ್ಲಿ ಕೀರ್ತಿ ಕುಟುಂಬದವರು ಸಂತ್ರಸ್ತರಿಗೆ ೨ ಲಕ್ಷದ ರೂ. ಹಣದ ಆಮಿಷ ತೋರಿಸಿದ್ದಾರೆ ಈ ಪ್ರಕರಣದಲ್ಲಿ ಡಿವೈಎಸ್ಪಿ ಪಾತ್ರ ಎದ್ದು ಕಾಣುತ್ತಿದೆ. ಈ ಕೂಡಲೇ ಈ ಪ್ರಕರಣದ ಕುರಿತು ಕೇಸನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲದಿದ್ದರೆ ಬಗ್ಗೆ ತೀವ್ರತರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಬೇಳೂರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ಟಿ.ಎಲ್.ಸುಂದರೇಶ್, ತೀರ್ಥಹಳ್ಳಿ ತಾಲ್ಲೂಕ್ ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ, ವೆಂಕಟೇಶ್, ಮೃತ ಅಂಬರೀಷ್ನ ಸಹೋದರ ಅಭಿಷೇಕ್, ವಿಕ್ರಂ,ವಾಸಪ್ಪ, ಕುರುವಳ್ಳಿ ನಾಗರಾಜ್, ಸೋಮಣ್ಣ, ಪದ್ಮಾನಾಭ್, ತಾರಾಮೂರ್ತಿ,ಮುಂಡಿಗಮನೆ ರಾಜ್ ಮತ್ತಿತರರು ಇದ್ದರು.


