Malenadu Mitra
ರಾಜ್ಯಶಿವಮೊಗ್ಗ

ಶ್ರೀಕಾಂತ್‌ಗೆ ಅದ್ದೂರಿ ಸ್ವಾಗತ, ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆ, ತೆರೆದ ಕಾರಿನಲ್ಲಿ ಭವ್ಯ ಮೆರವಣಿಗೆ, ಅಭಿಮಾನಿಗಳ ಹರ್ಷೋದ್ಘಾರ

ಶಿವಮೊಗ್ಗ, ನ.೫: ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಬಲಿಷ್ಠಗೊಳಿಸಿ, ತಾನು ಚುನಾವಣೆಯಲ್ಲಿ ಸೋತರೂ ಮೂವರು ಶಾಸಕರನ್ನು ಜಿಲ್ಲೆಯಲ್ಲಿ ಗೆಲ್ಲಿಸಿದ್ದ  ಆ ಪಕ್ಷದ ಜಿಲ್ಲಾ ಅಧ್ಯಕ್ಷ ರಾಗಿದ್ದ   ಎಂ ಶ್ರೀಕಾಂತ್ ಅವರು ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸುವ ಮೂಲಕ ವಿಧ್ಯುಕ್ತವಾಗಿ ಸೇರಿದರು.ಇದಕ್ಕೂ ಮುನ್ನ  ಕಾಂಗ್ರೆಸ್ ಕಚೇರಿಗೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕಚೇರಿಯ ಬಳಿ ಎರಡು ಕ್ರೇನ್‌ಗಳಲ್ಲಿ ದೊಡ್ಡ ಹೂವಿನ ಹಾರ, ಸೇಬಿನ ಹಾರಗಳಿಂದ ಸ್ವಾಗತಿಸಲಾಯಿತು. ಪುಷ್ಪಗಳ ಮಳೆಗರೆಯಲಾಯಿತು. ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ಮಧ್ಯೆಯೇ, ಷುರುಷ ಮತ್ತು ಮಹಿಳಾ ಡೊಳ್ಳಿನ ತಂಡದ ಅಬ್ಬರದ ಸದ್ದಿನೊಂದಿಗೆ ಕಾರ್‍ಯರ್ತರ ಜೈಕಾರದೊಂದಿಗೆ ಶ್ರೀಕಾಂತ್  ಕಚೇರಿಗೆ ಆಗಮಿಸಿದರು. ತೆರೆದ ಕಾರಿನಲ್ಲಿ ಬಂದ ಶ್ರೀಕಾಂತ್ ಪರವಾಗಿ ಜೈಕಾರ ಕೂಗಿದರು.  ಆನಂತರ  ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೂಕುನುಗ್ಗಲು ಉಂಟಾಯಿತು. ಶ್ರೀಕಾಂತ್ ಅವರೊಂದಿಗೆ ಕಾಂಗ್ರೆಸ್ ಸೇರಿದ ಅವರ ಬೆಂಬಲಿಗರು ಹರ್ಷೋದ್ಘಾರದಿಂದ ಸಂಭ್ರಮಿಸಿದರು.

ಬಳಿಕ ಪಕ್ಷದ ನಿಯಮದ ಪ್ರಕಾರ ಸದಸ್ಯತ್ವ ಕೊಡುವ ಮೂಲಕ  ಎಂ. ಶ್ರೀಕಾಂತ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್,  ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು, ರಾಜ್ಯದ ಎಲ್ಲಾ ಪಕ್ಷಗಳ ಮಾಜಿ ಮತ್ತು ಹಾಲಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ದಿನೇದಿನೇ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಯುತವಾಗಿ ಬೆಳೆಯುತ್ತಿದೆ ಶ್ರೀಕಾಂತ್ ಸೇರ್ಪಡೆ ಜಿಲ್ಲೆಗಷ್ಟೆ ಅಲ್ಲ, ರಾಜ್ಯ ಕಾಂಗ್ರೆಸ್‌ಗೆ ಇನ್ನಷ್ಟು ಬಲತಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಕೋಮು ಗಲಭೆಗಳಿಗೆ ಕಾರಣವಾದ ಬಿಜೆಪಿಯನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ನಾಶದತ್ತ ಸಾಗಿದೆ. ಮೋದಿ ಸುಳ್ಳಿನ ಕಂತೆಯನ್ನು ಜನ ಅರಿತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಂ. ಶ್ರೀಕಾಂತ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಸಾವಿರಾರು ಭಾಷೆ ಮತ್ತು ಸಂಸ್ಕೃತಿ, ಧರ್ಮ ಉಳ್ಳ ಈ ದೇಶವನ್ನು ಕಾಂಗ್ರೆಸ್ ಪಕ್ಷವು ಒಟ್ಟಾಗಿ ತೆಗೆದುಕೊಂಡು ಬಂದಿದೆ. ಬಡವರು ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಈಡೇರಿಸಿದೆ. ನಾವು ಸುಮ್ಮನೆ ಭಾಷಣ ಮಾಡುತ್ತಾ ಕುಳಿತರೆ ಆಗುವುದಿಲ್ಲ. ಪ್ರತಿಯೊಬ್ಬ ಮತದಾರನ ಮನೆ, ಮನ ತಲುಪಬೇಕು. ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕು ಎಂದ ಅವರು, ನಮ್ಮ ಪಕ್ಷದ ಸಿದ್ಧಾಂತ ಮತ್ತು ಧ್ಯೇಯಗಳನ್ನು ಮನವರಿಕೆ ಮಾಡ ಬೇಕು. ಆಗ ನಮ್ಮ ಮುಂದಿನ ಗೆಲುವಿಗೆ ಸುಲಭವಾಗುತ್ತದೆ. ಅನೇಕ ಪಕ್ಷದ ಮುಖಂಡರು ಸಾಗರೋಪಾದಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.


  ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಂ ಶ್ರೀಕಾಂತ್ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿ ರುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.  ಶ್ರೀಕಾಂತ್ ರಾಜಕೀಯದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬಡವರ ಪರ ತುಡಿತ ಹೊಂದಿದವರು. ಕಾರ್ಮಿಕ ವಲಯ, ಶ್ರಮಿಕ ವಲಯ ಹೇಗೆ ಎಲ್ಲರ ಏಳಿಗೆಗೂ ಶ್ರಮಿಸುವ ಮನೋಭಾವ ಹೊಂದಿದ್ದಾರೆ. ಅವರ ಪಕ್ಷ ಸೇರ್ಪಡೆಯಿಂದಾಗಿ ಕಾಂಗ್ರೆಸ್ಗೆ ಹೊಸ ಚೈತನ್ಯ ಸಿಗಲಿದೆ ಎಂದರು.

ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಡಿಕೇರಿಯ ಕೆ.ಕೆ. ಮಂಜುನಾಥ್, ಆರ್. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಹೆಚ್.ಸಿ. ಯೋಗೇಶ್, ಆರ್.ಎಂ. ಮಂಜುನಾಥ ಗೌಡ, ಶಿವಕುಮಾರ್, ವೈ.ಹೆಚ್. ನಾಗರಾಜ್, ಎನ್. ರಮೇಶ್, ದೇವೇಂದ್ರಪ್ಪ, ಗಿರೀಶ್, ಕಲಿಂ ಪಾಶಾ, ವಿಶ್ವನಾಥ್ ಕಾಶಿ, ರಂಗನಾಥ್, ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ನಾಗರಾಜ್ ಕಂಕಾರಿ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.

Ad Widget

Related posts

ಅಕ್ಟೋಬರ್ 1 ರಿಂದ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರ

Malenadu Mirror Desk

ಅರಿವಿನ ಕೊರತೆ ಕ್ಯಾನ್ಸರ್ ಉಲ್ಬಣತೆಗೆ ಮುಖ್ಯ ಕಾರಣ : ಡಾ.ರೋಷನ್

Malenadu Mirror Desk

ತಡರಾತ್ರಿ ಪಾರ್ಟಿ ಮಾಡುವಾಗ ಸ್ನೇಹಿತರಿಂದಲೇ ಕೊಲೆ. ಶವ ಕೆರೆಯಲ್ಲಿ ಪತ್ತೆ.

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.