ಶಿವಮೊಗ್ಗ: ಕಳೆದ ಎರಡು ದಿನದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಭಾರೀ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿತ್ತು. ಹಲವೆಡೆ ತೋಟ, ಗದ್ದೆಗಳು ಸಂಪೂರ್ಣ ಜಲಾವೃತವಾದರೇ, ಕೆರೆ- ಕಟ್ಟೆಗಳು ಮತ್ತೋಮ್ಮೆ ತುಂಬಿ ಹರಿಯುವಂತಾಗಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ಮತ್ತೋಂದು ಸಮಸ್ಯೆ ಎದುರಾಗಿದೆ.
ಕೆಂಪು ಬಣ್ಣಕ್ಕೆ ತಿರುಗಿದ ತುಂಗಾ ಡ್ಯಾಂ ನೀರು.

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ವ್ಯಾಪಕ ಮಳೆಯಾಗಿದ್ದು, ಗಾಜನೂರಿನ ತುಂಗಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ನೀರು ಪ್ರಸ್ತುತ ಕೆಂಪು ಬಣ್ಣಕ್ಕೆ ತಿರುಗಿದೆ. ಎರಡು ದಿನಗಳ ಮಳೆಗೆ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದೆ.
ಶಿವಮೊಗ್ಗ ನಗರಕ್ಕೆ ನೀರಿನ ಸರಬರಾಜನ್ನು ಗಾಜನೂರಿನ ತುಂಗಾ ಜಲಾಶಯದಿಂದಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡುತ್ತಿದೆ. ಹೀಗಾಗಿ ಸಾರ್ವಜನಿಕರು ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.


