ಶಿವಮೊಗ್ಗ: ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರ್ ಹಾಗೂ ಅರ್ಧ ಹೆಲ್ಮೆಟ್ ವಿರುದ್ಧ ಸಮರ ಸಾರಿರುವ ಶಿವಮೊಗ್ಗ ಪೊಲೀಸರು ಬರೋಬ್ಬರಿ 3 ಸಾವಿರ ಹೆಲ್ಮೆಟ್ ನಾಶ ಮಾಡಿದ್ದಾರೆ.
ಭದ್ರಾವತಿ ನಗರದ ರಂಗಪ್ಪ ಸರ್ಕಲ್ ನಲ್ಲಿ ಭಾನುವಾರ ಎಲ್ಲಾ ಹೆಲ್ಮೆಟ್ ಹಾಗೂ ಸೈಲೆನ್ಸರ್ ಗಳನ್ನು ರಾಶಿ ಹಾಕಿ, ಬುಲ್ಡೋಜರ್ ಮೂಲಕ ಪುಡಿ ಮಾಡಿ, ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಿದ್ದಾರೆ.

ಕಳೆದ 6 ತಿಂಗಳಿಂದ ಸಂಗ್ರಹಿಸಿದ್ದ ಸುಮಾರು 3 ಸಾವಿರ ಹಾಫ್ ಹೆಲ್ಮೆಟ್ ಗಳು ಹಾಗೂ ಕರ್ಕಶ ಶಬ್ಧ ಮಾಡುವ 20 ಸೈಲೆನ್ಸರ್ ಗಳನ್ನು ನಾಶ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ದ್ವಿಚಕ್ರ ವಾಹನಗಳ ಸವಾರರು ತಲೆಗೆ ಹಾಫ್ ಹೆಲ್ಮೆಟ್ ಧರಿಸುವುದು ಸೂಕ್ತ ಅಲ್ಲ. ಅಪಘಾತವಾದರೇ ಪ್ರಾಣಕ್ಕೆ ರಕ್ಷಣೆಯಿರಲ್ಲ. ಪೂರ್ಣ ಪ್ರಮಾಣದ ಹೆಲ್ಮೆಟ್ ಬಳಸಬೇಕು. ಜೊತೆಗೆ ಪೊಲೀಸ್ ಇಲಾಖೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಕೆ.ಆರ್.ನಾಗರಾಜ್, ಇನ್ಸ್ಪೆಕ್ಟರ್ ಜಗದೀಶ್ ಸೇರಿದಂತೆ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು.


