Malenadu Mitra
ರಾಜ್ಯ

ಶಿವಮೊಗ್ಗ ಆಯುರ್ವೇದಿಕ್‌ ಕಾಲೇಜಿಗೆ ಬೋಧಕ ಸಿಬ್ಬಂದಿ-ಸ್ಟಾಫ್‌ನರ್ಸ್ ನೇಮಕ

ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬೋಧಕ ಸಿಬ್ಬಂದಿ, ಆಸ್ಪತ್ರೆಗೆ ಸ್ಟಾಫ್‌ನರ್ಸ್ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಬುಧವಾರ ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ, ಇದೇ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಪ್ರಶಾಂತ ಕೆಕೊಡ ಮಾತನಾಡಿ, ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ ಬೋಧಕ ಸಿಬ್ಬಂದಿಗಳ ಕೊರತೆ ಇದೆ. ಆದ ಕಾರಣ ಬಿಎಎಂಎಸ್ ವಿದ್ಯಾರ್ಥಿಗಳ ಮಂಜೂರು ಸೀಟು 60 ಇದ್ದು, ದಾಖಲು ಸಂಖ್ಯೆ 33 ಕ್ಕೆ ಇಳಿಕೆಯಾಗಿದೆ.
ಆಯುರ್ವೇದ ಬೋಧನಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಕೊರತೆ ಸಹ ಇದ್ದು, ಇವರನ್ನು ನೇಮಕ ಮಾಡುವಂತೆ ಹಾಗೂ ಹೊಸದಾಗಿ ಪಿಜಿ ಕೋರ್ಸ್ ಆರಂಭಿಸಲು ಜಾಗದ ಅವಶ್ಯಕತೆ ಇದ್ದು, ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳು ಮಾತನಾಡಿ, ಬಾಲಕರ ಹಾಸ್ಟೆಲ್ ಇಲ್ಲ. ಆದ್ದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರದಲ್ಲಿ ಹಾಸ್ಟೆಲ್‌ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಹಾಗೂ ಕ್ಯಾಂಟಿನ್, ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಇಂಟರ್ನ್ಗಳಿಗೆ ಸ್ಟೈಫಂಡ್‌ ಹೆಚ್ಚಳ ಮಾಡುಂತೆ ಕೋರಿದರು. ಮತ್ತು ವಿದ್ಯಾರ್ಥಿ ವೇತನ ಪಡೆಯುವಲ್ಲಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಮಸ್ಯೆ ಇದ್ದು ಸರಿಪಡಿಸುವಂತೆ ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ, ಬೋಧಕ ಸಿಬ್ಬಂದಿ, ಸ್ಟಾಫ್ ನರ್ಸ್ ನೇಮಕಾತಿ, ಪಿಜಿ ಕೋರ್ಸ್ ಆರಂಭಿಸಲು ಜಾಗ ನೀಡುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿಲ್ಲೆಯಲ್ಲಿ 35 ಆಯುಷ್ ಕೇಂದ್ರಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಈ ಕೇಂದ್ರಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾದ ಹೊಸ ಮಾರ್ಗಸೂಚಿಯನ್ನು ಆಯುಷ್ ಇಲಾಖೆ ಪಾಲನೆ ಮಾಡಬೇಕು ಎಂದರು. ಆಯುರ್ವೇದ ಆಸ್ಪತ್ರೆಗೆ ಹೆಚ್ಚುವರಿ ನೀರಿನ ಸಂಪರ್ಕ ಅಗತ್ಯವಿದ್ದು, ಶೀಘ್ರವೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹ ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಕಳೆದ ಸಾಲಿನಲ್ಲಿ ರ‍್ಯಾಂಕ್ ಪಡೆದ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಅಭಿನಂದಿಸಿದರು.
ಸಭೆಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಮಾಜಿ ವಿಧಾನಪರಿಷತ್ ಶಾಸಕ ಪ್ರಸನ್ನಕುಮಾರ್, ಮಾಜಿ ಪಾಲಿಕೆ ಸದಸ್ಯ ಯೋಗೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜು, ಕಾಲೇಜಿನ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Ad Widget

Related posts

ಡಾ. ಪ್ರಸನ್ನಕುಮಾರ್ ಗೆ ಪ್ರತಿಷ್ಠಿತ ವಿಜ್ಹನ್ ಪ್ರಶಸ್ತಿ

Malenadu Mirror Desk

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಐವರ ಬಂಧನ

Malenadu Mirror Desk

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು: ಎಸ್.ಎನ್. ಚನ್ನಬಸಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.