ಶಿವಮೊಗ್ಗದಲ್ಲಿ ಎಲ್ಲವೂ ಕೊರತೆ ಇದೆ, ಆದರೆ ನಾವ್ ಮ್ಯಾನೇಜ್ ಮಾಡ್ತಿದಿವಿ
ಮುಂದಿನ ಒಂದುವಾರದಲ್ಲಿ ಇಡೀ ಶಿವಮೊಗ್ಗ ನಗರಕ್ಕೆ ಸ್ಯಾನಿಟೈಜ್ ಮಾಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗ ನಗರದಲ್ಲಿ ಕೋವಿಡ್ ಸುರಕ್ಷಾಪಡೆ ಮತ್ತು ಸೇವಾ ಭಾರತಿ ಆಯೋಜಿಸಿದ್ದ ಸ್ಯಾನಿಟೈಜೇಷನ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ ಎಲ್ಲ ನಾಗರಿಕರಿಗೆ ಆಯುಷ್ಕಿಟ್ ಕೊಡುವ ಮೂಲಕ ಕೊರೊನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ವರ್ಷ ಇಡೀ ನಗರಕ್ಕೆ ಸ್ಯಾನಿಟೈಜ್ ಮಾಡಲಾಗುವುದು. ಇದಕ್ಕಾಗಿ ಆರು ವಾಹನಗಳು ಸಿದ್ಧವಾಗಿದ್ದು, ಪ್ರತಿ ವಾಹನ ಎರಡು ವಾರ್ಡುಗಳಂತೆ ಕಾರ್ಯಾರಂಭ ಮಾಡಲಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಕೊರೊನ ಸೋಂಕು ಹರಡುವುದನ್ನು ತಡೆಯಬಹುದು ಎಂದು ಸಚಿವರು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ಷಿಜನ್ ಮತ್ತು ವೆಂಟಿಲೇಟರ್ ಸಮಸ್ಯೆ ಈತನಕ ಆಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಕೊರೊನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇಡೀ ದೇಶದಲ್ಲಿ ಏನು ಆಗುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಶಿವಮೊಗ್ಗದಲ್ಲಿ ಸಮಸೆ ್ಯಉಲ್ಬಣಿಸದಂತೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಬರಬಹುದಾದ ಸಂಕಷ್ಟ ಕುರಿತು ಹೆಚ್ಚು ತಯಾರಿ ಆಗಬೇಕಿದೆ ಎಂದು ಅವರು ಹೇಳಿದರು.
ಲಸಿಕೆ ಬೇಡಿಕೆಗನುಗುಣವಾಗಿ ಲಭ್ಯವಿಲ್ಲ ಆದ್ಯತೆಯ ಮೇರೆ ಲಸಿಕೆ ಅಭಿಯಾನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಕೊರೊನ ವಿರುದ್ಧದ ಹೋರಾಟದಲ್ಲಿ ಜನರ ಸಹಕಾರ ಅತಿ ಮುಖ್ಯವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಜತೆಗೆ ನಾಗರೀಕರು ಹೊರಗೆ ಬರದೆ ತಮ್ಮ ಸುರಕ್ಷತೆ ಬಗ್ಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮೇಯರ್ ಸುನೀತಾ ಅಣ್ಣಪ್ಪ, ಜಿ.ಪಂ ಸದಸ್ಯ ಕೆ.ಇ.ಕಾಂತೇಶ್, ಉಪಮೇಯರ್ ಗನ್ನಿಶಂಕರ್,ಸೇವಾಭಾರತಿ ಮುಖ್ಯಸ್ಥರು ಹಾಜರಿದ್ದರು.


