ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು(1ರಿಂದ 7ನೇ ತರಗತಿ) ಭೌತಿಕವಾಗಿ ತರಗತಿಗಳು ಆರಂಭವಾದಾಗ 6 ರಿಂದ 8ನೇ ತರಗತಿ ಪಾಠ ಬೋಧನಾ ಭಹಿಷ್ಕಾರ ಚಳವಳಿ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸೊರಬ ಘಟಕದಿಂದ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಲಾಯಿತು.
2016 ಇಸವಿಯಿಂದ ಪೂರ್ವದಲ್ಲಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು(1-7) ಪ್ರಾಥಮಿಕ ಶಾಲಾ ಶಿಕ್ಷಕರು(1-5) ಎಂದು ಪದನಾಮಕರಿಸಿ ಅವರ ಸೇವಾಜೇಷ್ಠತೆ ಮತ್ತು ಪದವಿ ವಿದ್ಯಾರ್ಹತೆಯನ್ನು ಪರಿಗಣಿಸದೆ ಹಿಂಬಡ್ತಿ ನೀಡಿದಂತಾಗಿದೆ.
ಕಳೆದ 20 ರಿಂದ 25 ವರುಷಗಳಿಂದ 6 ರಿಂದ 8ನೇ ತರಗತಿಗಳನ್ನು ಬೋದಿಸುತ್ತಿರುವ ಅರ್ಹ ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ಅನ್ಯಾಯವಾಗಿದೆ. ಅಲ್ಲದೆ ಪ್ರೌಢಶಾಲಾ ಶಿಕ್ಷಕರ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡುವಲ್ಲಿಯು ಸಹ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಶಾಂತಿಯುತವಾಗಿ ನಿರಂತರ ಹೋರಾಟ, ತರಗತಿ ಬಹಿಷ್ಕಾರ, ಶೈಕ್ಷಣಿಕ ಸಮಾವೇಷಗಳನ್ನು ಹಮ್ಮಿಕೊಂಡು ಎಚ್ಚರಿಸುತ್ತಾ ಬಂದರೂ ಕೂಡ ಇಲಾಖೆಯು ವಿಳಂಬ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ತರಗತಿಗಳು ಭೌತಿಕವಾಗಿ ಆರಂಭವಾದ ಕೆಲ ದಿನಗಳಲ್ಲಿ 6 ರಿಂದ 8ನೇ ತರಗತಿಗಳ ಪಾಠ ಬೋಧನಾ ಭಹಿಷ್ಕಾರ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸೊರಬ ಘಟಕದ ಅಧ್ಯಕ್ಷೆ ಶಶಿಕಲಾ, ಪ್ರಧಾನ ಕಾರ್ಯದರ್ಶಿ ಎಂ.ಎಚ್.ಶಕುಂತಲಾ, ಕೋಶಾಧ್ಯಕ್ಷೆ ಶ್ರೀಮತಿ ಜೋಶಿ, ಗೌರವ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಸಮಿತಿ ಸದಸ್ಯರಾದ ಯಶೋಧ, ಸವಿತಾ ಇದ್ದರು.


