Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗ ನಗರ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು ಮೇಯರ್ ಸುನೀತಾರಿಂದ ಜನರಿಗೆ ಸಾಂತ್ವನ,ಲಿಂಗನಮಕ್ಕಿಗೆ 1801.90 ಅಡಿ ನೀರು

ಮಲೆನಾಡಿನಲ್ಲಿ ಪುಷ್ಯ ಮಳೆಯ ಆರ್ಭಟ ಜೋರಾಗಿದ್ದು,ಶುಕ್ರವಾರದ ಸಂಜೆ ಹೊತ್ತಿಗೆ ನದಿಗಳು ಅಪಾಯದ ಮಟ್ಟ ಮೀರಿದ್ದವು. ಕೊಪ್ಪ, ಶೃಂಗೇರಿ ಹಾಗೂ ತೀರ್ಥಹಳ್ಳಿಯಲ್ಲಿ ಕಳೆದ 24 ತಾಸುಗಳಲ್ಲಿ ಸುರಿದ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. 85 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಶಿವಮೊಗ್ಗ ಶಾಂತಮ್ಮ ಲೇಔಟ್, ಇಮಾಂ ಬಾಡ, ಕುಂಬಾರಗುಂಡಿ, ಸಿನೆಮಾ ರಸ್ತೆಗೆ ತುಂಗಾ ನದಿ ನೀರು ನುಗ್ಗಿದ್ದು, ಅಪಾಯದಲ್ಲಿರುವ ಜನರನ್ನು ಶಾಲೆ ಮತ್ತು ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಮೇಯರ್ ಮಿಂಚಿನ ಕಾರ್ಯಾಚರಣೆ

ಮೇಯರ್ ಸುನೀತಾ ಮತ್ತವರ ಪತಿ ಅಣ್ಣಪ್ಪ, ಉಪಮೇಯರ್ ಗನ್ನಿಶಂಕರ್ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಇತರೆ ಪಾಲಿಕೆ ಸದಸ್ಯರು ರಾತ್ರಿವೇಳೆ ನಗರದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದರು.

ಲಿಂಗನಮಕ್ಕಿಗೆ 1801.90 ಅಡಿ ನೀರು

ರಾತ್ರಿ 10 ಗಂಟೆ ಹೊತ್ತಿಗೆ ಲಿಂಗನಮಕ್ಕಿ ಜಲಾಶಯಕ್ಕೆ 1801.90 ಅಡಿ ನೀರು ಬಂದಿತ್ತು. ಸರಾಸರಿ ಒಳ ಹರಿವು ಒಂದು ಲಕ್ಷ ಕ್ಯೂಸೆಕ್ ಗೂ ಹೆಚ್ಚಿತ್ತು ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಒಳಹರಿವು ಇರುವ ಕಾರಣ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇದೇ ಪ್ರಮಾಣದ ಒಳ ಹರಿವು ಮುಂದುವರಿದರೆ ಯಾವುದೇ ಕ್ಷಣದಲ್ಲಿ ಜಲಾಶಯದ ಬಾಗಿಲು ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಾಸಕ ಹಾಲಪ್ಪರಿಂದ ಸಿಟಿರೌಂಡ್ಸ್
ಸಾಗರ ಕ್ಷೇತ್ರದಲ್ಲಿನ ಜಲಾವೃತ ಪ್ರದೇಶಗಳಿಗೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಗರ ವ್ಯಾಪ್ತಿಯ ವಿನೋಬನಗರದಲ್ಲಿನ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿ,ಅವೈಜ್ಞಾನಿಕ ಲೇಔಟ್ ನಿರ್ಮಾಣದಿಂದ ಇಂತಹ ಅನಾಹುತ ಆಗುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಉಕ್ಕಿಹರಿದ ವರದಾ ನದಿ : ಅಪಾಯದಲ್ಲಿ ಮಂಡಗಳಲೆ ಸುತ್ತಲಿನ ಗ್ರಾಮಗಳು.

ಅಬ್ಬರಿಸುತ್ತಿರುವ ಗಾಳಿ-ಮಳೆಯಿಂದಾಗಿ ರಭಸವಾಗಿ ತುಂಬಿ ಉಕ್ಕಿ ಹರಿಯುತ್ತಿರುವ ವರದಾ ನದಿ ತೀರದ ಮಂಡಗಳಲೆ ಕಾನಲೇ ಗ್ರಾಮದಲ್ಲಿ ವರದಾ ಹೊಳೆ ಒಡ್ಡು ಒಡೆದು ಹೋಗಿದ್ದ ಪರಿಣಾಮವಾಗಿ ಮುಳುಗುವ ಅಪಾಯ ಎದುರಿಸುತ್ತಿವೆ. ಬೆಳಗ್ಗೆಯಿಂದ ಉಕ್ಕೇರಿದ ನದಿಯಿಂದ ಕಾನಲೆ ಹಾಗೂ ಕಾಗೋಡು ಮಾರ್ಗ ಈಗಾಗಲೇ ಎರಡು ಕಡೆಯ ರಸ್ತೆಯೂ ಮುಚ್ಚಿಹೋಗಿದೆ. ಮಂಡಗಳಲೆಗೆ ಸಂಪರ್ಕ ಕಡಿದು ಹೋಗಿದೆ. ಕಾನಲೆ,ಮಂಡಗಳಲೆಯ ಹಲವಾರು ಮನೆಗಳು ಜಲಾವೃತವಾಗಿದೆ. ಹೀಗೆ ರಾತ್ರಿಯಿಡೀ ಮುಂದುವರಿದರೆ ಊರನ್ನು ಸ್ಥಳಾಂತರಿಸಬೇಕಾದ ಅಪಾಯ ಇದೆ. ಮಂಡಗಳಲೆ ದಲಿತರ ಕೇರಿ ಅಂಚಿನಲ್ಲಿ ಅಪಾಯದ ಮಟ್ಟಕ್ಕೆ ನೀರು ಏರುತ್ತಲೇ ಇದೆ. ಈಗಲೂ ನಿಲ್ಲದ ಮಳೆಯಿಂದಾಗಿ ರಾತ್ರಿವೇಳೆಗೆ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಿಸಿದ ತಾಲೂಕು ಆಡಳಿತ, ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

Ad Widget

Related posts

ರಾಜ್ಯ ಸರ್ಕಾರದಿಂದ ಕಾರ್ಮಿಕರಲ್ಲಿ ವಿಶ್ವಾಸ ತುಂಬುವ ಕೆಲಸ : ಸಚಿವ ಶಿವರಾಮ್ ಹೆಬ್ಬಾರ್

Malenadu Mirror Desk

ಮಲೆನಾಡಿನಲ್ಲಿ ಸಂಭ್ರಮದ ಗೌರಿಹಬ್ಬ

Malenadu Mirror Desk

ಮಲೆನಾಡಲ್ಲಿಂದು ಕಾಂಗ್ರೆಸ್ ಜನಾಕ್ರೋಶ ಕಹಳೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.