ಪ್ರದೇಶ ಈಡಿಗ ಮಹಾಸಂಸ್ಥಾನದ ನಾರಾಯಣಗುರು ಮಠದ ರೇಣುಕಾ ಪೀಠದ ಪೀಠಾಧಿಪತಿಯಾಗಿ ವಿಖ್ಯಾತಾನಂದ ಶ್ರೀಗಳು ಪೀಠಾರೋಹಣ ಮಾಡಿದರು. ರಾಮನಗರ ಜಿಲ್ಲೆಯ ಸೋಲೂರಿನಲ್ಲಿರುವ ಮಠದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬುಧವಾರ ಬೆಳಗ್ಗೆ ಕೇರಳದ ಶಿವಗಿರಿ ಮಠದ ಹಿಂದಿನ ಅಧ್ಯಕ್ಷ ಪದ್ಮಶ್ರೀ ವಿಶ್ಯುದ್ದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ವಿಖ್ಯಾತನಂದ ಪಟ್ಟಾಭಿಷೇಕ ಮಹೋತ್ಸವ ನೆರವೇರಿತು.

ಮಠದ ಆವರಣದಲ್ಲಿ ಇರುವ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ನೂತನ ಶ್ರೀಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬೆಳಿಗ್ಗೆ ೮.೪೫ರ ಶುಭ ಲಗ್ನದಲ್ಲಿ ಶ್ರೀಗಳನ್ನು ಪೀಠದಲ್ಲಿ ಕೂರಿಸಿ ಪಾದಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ.ಎಸ್.ರಾಮಪ್ಪ, ಇಂಧನ ಸಚಿವ ಸುನಿಲ್ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆ ಪ್ರತಿಪಕ್ಷನಾಯಕ ಬಿ.ಕೆ.ಹರಿಪ್ರಸಾದ್, ಈಡಿಗ ಸಂಘದ ರಾಜ್ಯಾಧ್ಯಕ್ಷ ಡಾ. ತಿಮ್ಮೇಗೌಡ, ರಾಜ್ಯ ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಎಂ.ಕೆ.ಪೋತರಾಜ್, ರಾಜಶೇಖರ ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳ ಈಡಿಗ ಸಂಘಟನೆಗಳು ಹಾಗೂ ಉಪ ಪಂಗಡಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ವಿಖ್ಯಾತನಂದ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದೆ ರೇಣುಕ ಪೀಠವು ಸಮುದಾಯಕ್ಕೆ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಶಿಕ್ಷಣದ ಜೊತೆಗೆ ಸಮುದಾಯದ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಲಿದೆ
– ಕೋಟ ಶ್ರೀನಿವಾಸ್ ಪೂಜಾರಿ, ಸಮಾಜ ಕಲ್ಯಾಣ ಸಚಿವ
ಈಡಿಗ ಸಮುದಾಯವನ್ನು ಒಗ್ಗೂಡಿಸುವ ಮತ್ತು ಆ ಸಮಾಜದ ಸಾಮಾಜಿಕ ,ಶೈಕ್ಷಣಿಕ ಬೆಳವಣಿಗೆಗೆ ಮಠ ಶ್ರಮಿಸಲಿದೆ. ಶ್ರೀಗಳ ನೇತೃತ್ವದಲ್ಲಿ ಶೋಷಿತ ಸಮುದಾಯಕ್ಕೆ ಅರಿವಿನ ಬೆಳಕು ಸಿಗಬೇಕು
ಬಿ.ಕೆ.ಹರಿಪ್ರಸಾದ್, ಪ್ರತಿಪಕ್ಷ ನಾಯಕ, ವಿಧಾನ ಪರಿಷತ್





