Malenadu Mitra
ರಾಜಕೀಯರಾಜ್ಯಶಿವಮೊಗ್ಗ

ಕ್ವಾರಿ ಮಾಲೀಕರಿಂದ ಗಣಿ ಸಚಿವರಿಗೆ ಸನ್ಮಾನ!


ಅಕ್ರಮ ಕ್ವಾರಿ ಸ್ಫೋಟದ ತನಿಖೆ ಮೇಲೆ ಪರಿಣಾಮ ಬೀರದೆ ?

ಶಿವಮೊಗ್ಗದಲ್ಲಿ ಮಹಾಸ್ಫೋಟ ಸಂಭವಿಸಿದ ಸ್ಥಳ ಪರಿಶೀಲನೆ ಮಾಡಿದ ಎರಡು ದಿನದಲ್ಲಿಯೇ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಶಿವಮೊಗ್ಗದವರೇ ಪ್ರಮುಖವಾಗಿರುವ ಕ್ವಾರಿ ಮಾಲೀಕರಿಂದ ಸನ್ಮಾನ ಮಾಡಿಸಿಕೊಂಡಿದ್ದಾರೆ. ಸಮಸ್ಯೆ ಹೇಳಿಕೊಳ್ಳುವುದು, ನೂತನ ಸಚಿವರನ್ನು ಅಭಿನಂದಿಸುವುದು ಸಹಜ ಪ್ರಕ್ರಿಯೆಯಾದರೂ, ಅದಕ್ಕೊಂದು ಸಮಯ ಸಂದರ್ಭ ಬೇಡವೇ?, ಅಕ್ರಮ ಕ್ವಾರಿ,ಕ್ರಷರ್ ಮತ್ತು ಸ್ಫೋಟಕ ಸಂಗ್ರಹಕ್ಕೆ ಈ ಜಿಲ್ಲೆಯಲ್ಲಿ ಯಾರೂ ಅನುಮತಿಯನ್ನೇ ಪಡೆದಿಲ್ಲ. ಜಿಲ್ಲೆ ಹಾಗೂ ರಾಜ್ಯದ ಎಲ್ಲೆಡೆ ಅಕ್ರಮವಾಗಿ ಸ್ಫೋಟಕ ಸಾಗಣೆ ಎಂಬ ಆರೋಪವಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ನಡೆದಿರುವ ಮಹಾಸ್ಫೋಟಕ್ಕೆ ಖುದ್ದು ಪ್ರಧಾನ ಮಂತ್ರಿಯೇ ಟ್ವೀಟ್ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ವಾರಿ ಮಾಲೀಕರ ಹಾರಕ್ಕೆ ಕೊರಳೊಡ್ಡುವ ತರಾತುರಿ ಸಚಿವರಿಗೆ ಇತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮುಖ್ಯ ಮಂತ್ರಿ ಸ್ಥಳ ಪರಿಶೀಲನೆ ನಡೆಸಿ ರಾಜ್ಯದ ಎಲ್ಲಾ ಅಕ್ರಮ ಕ್ವಾರಿ ಬಂದ್ ಮಾಡಲು ಸೂಚನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಇಷ್ಟು ವರ್ಷ ಅಕ್ರಮ ಹಾಗೂ ಸಕ್ರಮ ಎರಡೂ ಕಲ್ಲುಗಣಿಗಳು ನಡೆಯುತ್ತಿವೆ. ಎರಡೂ ಮಾದರಿಯ ಕ್ವಾರಿಯನ್ನು ಪ್ರತಿನಿಧಿಸುವ ಸಂಘಟನೆಗೆ ಶಿವಮೊಗ್ಗದವರೇ ಆದ ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷರು ಗೌರವ ಅಧ್ಯಕ್ಷರು. ಬಿಜೆಪಿ ಬೆಂಬಲಿಗ ಕ್ವಾರಿ ಮಾಲೀಕರೂ ಇರುವ ಸಂಘಟನೆಯಿಂದ ಮುರುಗೇಶ್ ನಿರಾಣಿ ಸನ್ಮಾನ ಮಾಡಿಸಿಕೊಂಡಿದ್ದಾರೆ.
ಸಕ್ರಮ ಕ್ವಾರಿಯವರ ಸಮಸ್ಯೆ ಹಲವು ಇದ್ದು, ಅವುಗಳನ್ನು ಸಚಿವರು ಕೇಳಲೇ ಬೇಕು. ಆದರೆ ಸನ್ಮಾನವನ್ನು ಮುಂದೂಡಬಹುದಿತ್ತು ಎಂದು ಯಾರಿಗಾದರೂ ಅನ್ನಿಸದೇ ಇರದು. ದೊಡ್ಡ ಪ್ರಕರಣವೊಂದು ನಡೆದಿದೆ. ದುರುಂತದಲ್ಲಿ ಆರು ಮಂದಿ ಸಾವು ಕಂಡಿದ್ದಾರೆ. ಈ ಸ್ಫೋಟಕ ಜಾಲದಲ್ಲಿ ಅನೇಕ ಕೈಗಳಿವೆ. ರಾಜಕಾರಣಿಗಳ ಸಹಕಾರ ಇಲ್ಲದೆ ಇವೆಲ್ಲ ನಡೆಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಆರೋಪ ಮಾಡಿದ್ದಾರೆ. ಈ ಸಮಯದಲ್ಲಿ ಕ್ವಾರಿ ಮಾಲೀಕರೊಂದಿಗೆ ಸನ್ಮಾನ ಮಾಡಿಸಿಕೊಳ್ಳುವುದರಿಂದ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಜನರು ತಿಳಿದಾರು ಎಂಬ ಸಾಮಾನ್ಯ ಅರಿವು ಸಚಿವರು ಮತ್ತು ಸನ್ಮಾನ ಮಾಡಿದವರಿಗೆ ಇರಬೇಕಾಗಿತ್ತು ಎಂಬ ಮಾತು ಶಿವಮೊಗ್ಗದಲ್ಲಿ ಕೇಳಿಬರುತ್ತಿದೆ. ಸನ್ಮಾನ ಸಂದರ್ಭ ಎಸ್.ದತ್ತಾತ್ರಿ, ಸಂಜೀವ್ ಹಟ್ಟಿಹೊಳಿ, ಎನ್.ಮಂಜುನಾಥ್,ಪುರುಷೋತ್ತಮ್,ಭಾಸ್ಕರ್, ವಾಗೀಶ್ ಮತ್ತಿತರರಿದ್ದರು.

Ad Widget

Related posts

ಸರಕಾರಿ ನೌಕರರಿಗೆ ನೈತಿಕ ಬೆಂಬಲ ಬೇಕು

Malenadu Mirror Desk

ನಕ್ಸಲ್‌ ನಾಯಕ ಬಿ ಜಿ ಕೃಷ್ಣಮೂರ್ತಿ ನಾಳೆ ಶಿವಮೊಗ್ಗ ಕೋರ್ಟ್‌ಗೆ , ಬಿಗಿ ಭದ್ರತೆಯಲ್ಲಿ ಕೇರಳದಿಂದ ಕರೆತರುತ್ತಿರುವ ಪೊಲೀಸರು

Malenadu Mirror Desk

ಬರ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸಲಿ: ಸಚಿವ ಮಧು ಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.