ಮಹಾ ಪಂಚಾಯತ್ಗೆ ಬೆಂಬಲ
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಪ್ರತಿಭಟನೆ ೧೦೦ನೇ ದಿನಕ್ಕೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಲು ಶಿವಮೊಗ್ಗ, ಹಾವೇರಿ, ಬೆಳಗಾವಿಯಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ದೇಶದಲ್ಲಿ ಯಾವುದೇ ಕಾನೂನು ಜಾರಿಗೊಳಿಸುವಲ್ಲಿ ಅಧಿವೇಶನದಲ್ಲಿ ಚರ್ಚಿಸಿ ಸಹಮತ ಪಡೆದು ಆದರೆ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದರಿಂದ ಪ್ರಜಾಪ್ರಭುತ್ವ ಪತನದ ಹಾದಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಮಾಜವಾದಿ ತಳಹದಿಯ ಮೇಲೆ ಕಾಗೋಡು ಹಾಗೂ ಬಗರ್ ಹುಕುಂ ಹೋರಾಟದ ಮೂಲಕ ಜನರಿಗೆ ಬದುಕು ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕನಾಗಿದ್ದಾಗ ಸಾವಿರಾರು ಜನರಿಗೆ ಭೂಹಕ್ಕು ನೀಡಿದ ತೃಪ್ತಿ ನನಗಿದೆ. ಸರ್ಕಾರದ ನಡೆಯನ್ನು ಖಂಡಿಸಿ ರೈತರು ಸಾಂಘಿಕ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಲಾಗುವುದು. ಕೇವಲ ರೈತರ ಹೋರಾಟವಾಗದೆ ಅನ್ನ ತಿನ್ನುವ ಪ್ರತಿಯೊಬ್ಬರ ಹೋರಾಟವಾಗಿ ಬದಲಾಗಬೇಕಿದೆ ಎಂದು ತಿಳಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಹೋರಾಟದ ತವರಾದ ಜಿಲ್ಲೆಯಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಜೆ.ಎಚ್.ಪಟೀಲ್, ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಗೇಣಿದಾರರ ಪರವಾಗಿ ಹೋರಾಟ ಮಾಡಿದ್ದಾರೆ. ಬಡವರ ತುಂಡು ಭೂಮಿ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ರೈತರೊಡನೆ ಹಲವು ಬಾರಿ ಮಾತುಕತೆ ನಡೆಸಿದ್ದರೂ ಪರಿಹಾರ ದೊರತಿಲ್ಲ. ಇದರ ಹಿಂದೆ ಬಂಡವಾಳಶಾಹಿ ನೀತಿ ಎದ್ದು ತೋರುತ್ತಿದೆ. ಪ್ರಪಂಚದಲ್ಲಿ ಕೃಷಿ ದೊಡ್ಡ ಉದ್ಯಮವಾಗಿದ್ದು, ಆಹಾರ ಉತ್ಪಾದನೆಯನ್ನು ರೈತರಿಂದ ಕಿತ್ತುಕೊಳ್ಳಲು ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ಮಾಚ್ ೨೦ರಂದು ಶಿವಮೊಗ್ಗದಲ್ಲಿ ನಡೆಯುವ ಬೃಹತ್ ರೈತ ಸಮಾವೇಶಕ್ಕೆ ರೈತ ಮುಖಂಡ ರಾಕೇಶ್ ಟಿಕಾಯಿತ್, ದರ್ಶನ ಪಾಲ್, ಯೋಗೇಂದ್ರ ಯಾದವ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಚ್.ಆರ್.ಬವರಾಜಪ್ಪ ಮಾತನಾಡಿ, ರೈತರು, ನವದೆಹಲಿಯಲ್ಲಿ ರೈತ ವಿರೋಧಿ ಮಸೂದೆ ಖಂಡಿಸಿ ೫೦೦ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಮಹಿಳೆಯರು ಹಾಗೂ ಜನ ಸಾಮಾನ್ಯರ ಪರ ಆಡಳಿತ ನಡೆಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತ ಸಮಾವೇಶದಲ್ಲಿ ರೈತ ವಿರೋಧಿ ಪ್ರಧಾನಿ ಎಂದು ಘೋಷಣೆ ಮಾಡಲಾಗುವುದು ಎಂದರು.
ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಬಿಜೆಪಿ ಸರ್ಕಾರ ಬ್ರಿಟಿಷರಗಿಂತಲೂ ಹೇಯವಾಗಿ ಜನರ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ರೈತ ವಿರೋಧಿ ಕಾನೂನುಗಳ ಹೋರಾಟಕ್ಕೆ ಮಹಿಳೆಯರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ರೈತ ಸಂಘಟನೆಗಳು ಒಳ ಜಗಳವನ್ನು ಬದಿಗಿಟ್ಟು ಒಕ್ಕೊರಲಿನಿಂದ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಶ್ರೀಕಾಂತ್, ವಕೀಲ ಕೆ.ಪಿ.ಶ್ರೀಪಾಲ್, ಡಿಎಸ್ಎಸ್ ಸಂಚಾಲಕ ಗುರುಮೂರ್ತಿ, ರಮೇಶ್, ಯೋಗೇಶ್, ಹಾಲೇಶಪ್ಪ, ವಿರೇಶ್, ರಾಘವೇಂದ್ರ, ರಾಜು, ಶಿವಮೂರ್ತಿ, ಶಿವಪ್ಪ ಓಟೂರು, ಬಸವರಾಜ ಹಸ್ವಿ, ವಜೀರ್ ಸಾಬ್, ಕೆ.ಎಲ್.ಅಶೋಕ್, ಶಿವಪೂಜಪ್ಪಗೌಡ, ಎಚ್.ಗಣಪತಿ, ಶೇಖರಮ್ಮ ರಾಜಪ್ಪ ಮಾಸ್ತರ್ ಇತರರಿದ್ದರು.


