ರಿಪ್ಪನ್ಪೇಟೆ: ಮಾಸ್ಕ್ ಧರಿಸಿ ಎಂದು ಹೇಳಿದ ಅಧಿಕಾರಿಗಳನ್ನು ನಿಂದಿಸಿದ ಆರೋಪದ ಮೇಲೆ ಪತ್ರಿಕಾ ವಿತರಕ ಹಾಗೂ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಅವರನ್ನು ಬಂಧಿಸಲಾಗಿದೆ.
ನಿತ್ಯದಂತೆ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದ ಕರೆದು ವಿಚಾರಣೆ ನಡೆಸುವ ವೇಳೆಯಲ್ಲಿ ಅವಾಚ್ಯವಾಗಿ ನಿಂದನೆಯ ಮಾತುಗಳನ್ನಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಗ್ರಾಮ ಪಂಚಾಯ್ತಿ ಪಿಡಿಒ ಜಿ.ಚಂದ್ರಶೇಖರ್ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಕಳೆದ ವರ್ಷವೂ ನಾನು ಮಾಸ್ಕ್ ಹಾಕಿಲ್ಲ. ಕೊರೊನ ವಿಚಾರದಲ್ಲಿ ಸರಕಾರ ಹೇಳುವುದೆಲ್ಲ ಸುಳ್ಳು ಎಂದು ಪ್ರತಿಪಾದಿಸಿದ ಕೃಷ್ಣಪ್ಪ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿದರು. ಮಾರ್ಗಸೂಚಿಯನ್ವಯ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದಾಗ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವುದಲ್ಲದೆ, ನಾನು ಆರೋಗ್ಯವಾಗಿದ್ದೇನೆ ಎಂದು ನಡುರಸ್ತೆಯಲ್ಲೇ ತಲೆಕೆಳಗಾಗಿ ಶೀರ್ಷಾಸನ ಹಾಕಿದರು. ಈ ಸಂದರ್ಭ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಿಡಿಒ ಜಿ.ಚಂದ್ರಶೇಖರ್ ರಿಪ್ಪನ್ಪೇಟೆ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ದೂರು ದಾಖಲಿಸುವುದರೊಂದಿಗೆ ಅರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರ್ ಪಡಿಸಲಾಗಿದೆ.


