ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕಗ್ಗೊಲೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ಯಡಿಯೂರಪ್ಪ ಅವರು ಹರ್ಷ ನಿವಾಸಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ನಾನು ಹಾಗೂ ಯಡಿಯೂರಪ್ಪ ಅವರು ಸರಕಾರದ ಪರವಾಗಿ ೨೫ ಲಕ್ಷ ಪರಿಹಾರ ನೀಡ್ತೇವೆ. ವಿಶ್ವನಾಥ ಶೆಟ್ಟಿ ಕೊಲೆಯಾದಾಗ ಬಿಜೆಪಿ ಅವರ ಕುಟುಂಬಕ್ಕೆ ೧೮ ಲಕ್ಷ ರೂ. ತಲುಪಿಸಿತ್ತು. ಟೀಕೆ-ಟಿಪ್ಪಣಿಗಳು ಸ್ವಾಭಾವಿಕ. ಆ ಸಂದರ್ಭದಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ವಿಶ್ವನಾಥ ಶೆಟ್ಟಿ ಕುಟುಂಬಕ್ಕೂ ಹಿಂದೂ ಸಮಾಜ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡ್ತೇವೆ ಎಂದರು.
ಮುಸಲ್ಮಾನ್ ಶಾಸಕರು ಸಭೆ ನಡೆಸಿ, ಇಂತಹ ಘಟನೆಗೆ ಪಿಎಫ್ಐ, ಎಸ್ಡಿಪಿಐ ಕಾರಣ ಕ್ರಮ ಕೈಗೊಳ್ಳಿ ಅಂದಿದ್ದರು. ಆ ನಾಯಕರುಗಳೇ ಸಂಘಟನೆ ನಿಷೇಧ ಮಾಡಿ ಅಂದಿದ್ದರು. ಆದರೆ, ಡಿಕೆಶಿ, ಸಿದ್ದರಾಮಯ್ಯ ಮಾತ್ರ ಆರ್ಎಸ್ಎಸ್ ಕಾರಣ ಅಂತಿದ್ದಾರೆ. ಶಿವಮೊಗ್ಗದಲ್ಲಿ ಆಸ್ತಿ-ಪಾಸ್ತಿ ಹಾನಿ ಮಾಡಿದವರಲ್ಲಿ ಹೊರಗಡೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಸ್ತಿ-ಪಾಸ್ತಿ ನಷ್ಟ ಆಗಿರುವವರಿಗೆ ಸರಕಾರದಿಂದ ಪರಿಹಾರ ಕೊಡ್ತೇವೆ.
ಶಿವಮೊಗ್ಗ ಕ್ಷೇತ್ರದ ಟಿಕೆಟ್ ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಅವರಿಗೆ ಇದುವರೆಗೆ ನೇರ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಳ್ಳೋದಕ್ಕೆ ಆಗಿಲ್ಲ. ಬಿ.ಕೆ.ಹರಿಪ್ರಸಾದ್ ಮೊದಲು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಟಿಕೆಟ್ ಪಡೆದು ಗೆದ್ದು ಬರಲಿ ನೋಡೋಣ. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿ ನೇರ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಾಗಿಲ್ಲ.
ಈ ಬಾರಿ ೨೨೪ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾದರೂ ಒಂದು ಕಡೆ ಟಿಕೆಟ್ ಪಡೆದು ಗೆದ್ದು ಬರಲಿ ನೋಡೋಣ. ಶಿವಮೊಗ್ಗ ಕ್ಷೇತ್ರ ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಅಂತ ಹೇಳೋದಕ್ಕೆ ಇಬ್ರಾಹಿಂ, ಹರಿಪ್ರಸಾದ್ ಯಾವನು ಎಂದು ಏಕವಚನದಲ್ಲಿ ಪ್ರಶ್ನಿಸಿದ ಅವರು, ಬಿಜೆಪಿ ಟಿಕೆಟ್ ಹಂಚಿಕೆ ಮಾಡಲು ಅವರಿಗೆ ಯಾರು ಅಧಿಕಾರ ಕೊಟ್ಟವರು ಎಂದು ಆಕ್ರೋಶವ್ಯಕ್ತಪಡಿಸಿದರು.


