Malenadu Mitra
ರಾಜ್ಯಶಿವಮೊಗ್ಗ

ಪ್ರಧಾನಿ ಕಾರ್ಯಕ್ರಮಕ್ಕೆ 15 ಎಕರೆ ಪ್ರದೇಶದಲ್ಲಿ ತಯಾರಿ ಸಚಿವ -ಸಂಸದರಿಂದ ಸ್ಥಳ ಪರಿಶೀಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಏ.24ರಂದು ಶಿವಮೊಗ್ಗ ತಾಲೂಕು ಹೊಳಲೂರು ಗ್ರಾ.ಪಂ.ಗೆ ಭೇಟಿ ನೀಡಲಿದ್ದು, ಸುಮಾರು ಹದಿನೈದು ಎಕರೆ ಜಾಗದಲ್ಲಿ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿದೆ. ಐದು ಎಕರೆ ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಲಿದೆ. ಪ್ರಧಾನಿ ಬರುವ ದೆಸೆಯಿಂದ ಹೊಳಲೂರು ಗ್ರಾಮಕ್ಕೂ ಶುಕ್ರದೆಸೆ ಬಂದಿದ್ದು, ರಾಜ್ಯದ ಉನ್ನತ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡುವುದು ಮಾಮೂಲಿಯಾಗಿದೆ.
ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಅವರು ಇಡೀ ದೇಶದ ಗ್ರಾಮೀಣ ಇಲಾಖೆಗಳ ಪರಿಶೀಲನೆ ಮಾಡುವ ಹಿನ್ನೆಲೆಯಲ್ಲಿ ಹೊಳಲೂರಿಗೆ ಭೇಟಿ ನೀಡಲಿದ್ದಾರೆ. ಅವರು ಆಗಮಿಸಲಿರುವ ಕಾರಣ ಹೊಳಲೂರಿನಲ್ಲಿರುವ ಸುಮಾರು 15 ಎಕರೆ ಜಾಗದಲ್ಲಿ 5 ಎಕರೆ ಜಾಗವನ್ನು ಹೆಲಿಪ್ಯಾಡ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಉಳಿದ 10 ಎಕರೆ ಜಾಗದಲ್ಲಿ ಕಾರ್ಯ ಕ್ರಮಕ್ಕಾಗಿ ನಿಗದಿಗೊಳಿಸಲಾಗಿದೆ ಎಂದರು.
ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದು, ಇಲಾಖೆಗಳ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ1 ಗಂಟೆಗೆ ಅವರ ಭಾಷಣ ಇರುತ್ತದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಜಿ.ಪಂ.ನಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿ.ಪಂ. ಮುಖ್ಯ ನಿರ್ವಹಣಾಧಿಕಾರಿ, ಸೇರಿದಂತೆ ಹಲವರೊಡನೆ ಚರ್ಚಿಸಲಾಗಿದೆ. ಒಂದು ರೀತಿಯಲ್ಲಿ ಪ್ರಗತಿ ಪರಿಶೀಲನೆಮಾಡಿದ್ದೇವೆ. ಈ ತಿಂಗಳ ೩೦ರ ವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ. ಅದು ಮುಗಿದ ನಂತರ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಕೆಎಸ್‌ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಆರ್.ಡಿ.ಪಿ.ಆರ್. ಆಯುಕ್ತೆ ಶಿಲ್ಪಾನಾಗ್, ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್, ಜಿ.ಪಂ. ಸಿಇಒ ಎಂ.ಎಲ್. ವೈಶಾಲಿ, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

34 ಕೊಳಚೆ ಪ್ರದೇಶಗಳ 5531 ಕುಟುಂಬಗಳಿಗೆ ಹಕ್ಕುಪತ್ರ

Malenadu Mirror Desk

ಕುವೆಂಪು ವಿವಿ ಘಟಿಕೋತ್ಸವ, ಪದ್ಮಭೂಷಣ ಡಾ.ಸುರೇಶ್ ಬಿ.ಎನ್ ಅವರಿಂದ ಘಟಿಕೋತ್ಸವ ಭಾಷಣ

Malenadu Mirror Desk

ಅಹಿಂದ ವರ್ಗಕ್ಕೆ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.