Malenadu Mitra
ರಾಜ್ಯಶಿವಮೊಗ್ಗ

ಮಲೆಶಂಕರ ದೇವಸ್ಥಾನದಲ್ಲಿ ಮೂರು ದಿನಗಳ ಅದ್ದೂರಿ ಜಾತ್ರೆ

ಪ್ರಸಿದ್ದ ಪೌರಾಣಿಕ ಪರಂಪರೆಯುಳ್ಳ ಶಿವಮೊಗ್ಗ ತಾಲೂಕು ಮಲೆಶಂಕರ ದೇವಸ್ಥಾನದಲ್ಲಿ ಏ.೨೪ ರಿಂದ ೨೬ ರವರೆಗೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಮೂರು ದಿನಗಳ ಕಾಲ ಜಾತ್ರೆಯನ್ನು ಅತ್ಯಂತ ವೈಭವಯುತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ದಿನವಾದ ಏ.೨೪ ರಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ನಂದಿಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ , ಅಂಕುರಾರ್ಪಣೆ ಇತ್ಯಾದಿ ಧಾಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.೨೫ ರಂದು ಬೆಳಗ್ಗೆ ೯.೩೦ ಕ್ಕೆ ಕಲಾ ತತ್ವ ಹವನ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ಸ್ವಾಮಿಯ ಮಹಾರೋಥೋತ್ಸವ ನೆರವೇರಲಿದೆ. ದಿನಾಂಕ ೨೬ ರಂದು ಬಲಿ ಚೂಣೋತ್ಸವ, ಅವಭೃತ ಸ್ನಾನ,ಸಂಧಾನ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ. ವೇದಭ್ರಹ್ಮ ಕೆಂಜಿಗಾಪುರ ಶ್ರೀಧರ ಭಟ್ಟ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ಹೇಳಿದರು
ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ಸರಕಾರದ ಕಡೆಯಿಂದ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ವರ್ಷಪೂರ್ತಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಸಮುದಾಯ ಭವನವಿದ್ದು, ಇಲ್ಲಿ ಸರಳ ವಿವಾಹ ಕಾರ್ಯಕ್ರಮಗಳು ನಡೆಯುತ್ತವೆ. ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಅತೀಸಮೀಪವಿರುವ ಒಂದು ಧಾರ್ಮಿಕ ಪ್ರವಾಸಿ ಕೇಂದ್ರ ಮಲೆಶಂಕರವಾಗಿದೆ. ದಟ್ಟ ಅರಣ್ಯದ ನಡುವೆ ಇರುವ ಈ ಕ್ಷೇತ್ರ ಭಕ್ತರ ಪಾಲಿನ ಪುಣ್ಯ ಕ್ಷೇತ್ರವಾಗಿದೆ. ಜಾತ್ರೆಗೆ ಶಿವಮೊಗ್ಗ ತಾಲೂಕು ಮಾತ್ರವಲ್ಲದೆ ಹೊರಗಿನಿಂದಲೂ ಭಕ್ತಾದಿಗಳು ಬರಲಿದ್ದು,ಅಂದಾಜು ೧೦ ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಹನುಮಂತಪ್ಪ ಅವರು ಹೇಳಿದರು.
ದೇವಸ್ಥಾನ ಸಮಿತಿಯ ಹೆಚ್.ಎನ್. ಮೋಹನ್ ಅವರು ಮಾತನಾಡಿ, ಮಲೆಶಂಕರ ದೇವಸ್ಥಾನಕ್ಕೆ ಸುಮಾರು ಐದು ಸಾವಿರ ವರ್ಷಗಳ ಪೌರಾಣಿಕ ಹಿನ್ನೆಲೆಯಿದೆ. ಮಹಾಭಾರತದಲ್ಲಿ ಬರುವ ಪಾಂಡವರು ವನವಾಸ ಅನುಭವಿಸಿದ ಇಂದ್ರಾಕಿಲ ಪರ್ವತವೇ ಮಲೆಶಂಕರ ಬೆಟ್ಟ ಎಂಬ ಐತಿಹ್ಯವಿದೆ. ಅರ್ಜುನ ಪರಶಿವನೊಂದಿಗೆ ಕಾದಾಡಿ ಪಾಶುಪತಾಸ್ತ್ರವನ್ನು ಪಡೆದಿದ್ದು, ಇದೇ ಇಂದ್ರಾಕಿಲ ಪರ್ವತ. ದೇವಸ್ಥಾನದ ಸಮೀಪವೇ ದೊಡ್ಡ ಗುಹೆಯೊಂದು ಇದೆ. ಈ ಎಲ್ಲ ಐತಿಹ್ಯಗಳು ಈ ದೇವಸ್ಥಾನಕ್ಕಿರುವ ಪೌರಾಣಿಕ ಹಿನ್ನೆಲೆಯನ್ನು ಸಾಕ್ಷೀಕರಿಸುತ್ತವೆ. ದೇವಸ್ಥಾನಕ್ಕೆ ಸಮೀಪದಲ್ಲಿಯೇ ಇರುವ ಕೊಳದಿಂದ ಬರುವ ತೀರ್ಥ ಸ್ವಾಮಿಯ ಗರ್ಭಗುಡಿಯ ಮೂಲಕ ಹರಿಯುತ್ತದೆ. ವರ್ಷದ ಎಲ್ಲಾ ಕಾಲದಲ್ಲಿಯೂ ಒಂದೇ ಮಟ್ಟದಲ್ಲಿ ಗಂಗೆ ಹರಿಯುವುದು ಈ ಸ್ಥಳದ ಮಹಿಮೆಗಳಲ್ಲೊಂದಾಗಿದೆ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚಂದ್ರಪ್ಪ, ಶಿವಣ್ಣ, ವಿರೂಪಾಕ್ಷಪ್ಪ ಮತ್ತಿತರರಿದ್ದರು.

Ad Widget

Related posts

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದ ಎಂ.ಶ್ರೀಕಾಂತ್

Malenadu Mirror Desk

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜ್ಞಾನ, ಶಕ್ತಿ ಇದೆ

Malenadu Mirror Desk

ಪರಿಸರ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಿದೆ: ವಿನಯ್ ಗುರೂಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.