Malenadu Mitra
ರಾಜ್ಯ

ಮನು ಸಂಸ್ಕೃತಿಯನ್ನು ಜಾರಿಗೊಳಿಸಲು ತೆರೆಮರೆಯಲ್ಲಿ ಪ್ರಯತ್ನ: ಮಧು ಬಂಗಾರಪ್ಪ

ಮನು ಸಂಸ್ಕೃತಿಯನ್ನು ಜಾರಿಗೊಳಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಸರಕಾರ ಭವಿಷ್ಯದಲ್ಲಿ ಸಾಮಾನ್ಯ ಜನರನ್ನು ಶೋಷಣೆ ಮಾಡಲಿದೆ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ರಂಗ ಮಂದಿರದಲ್ಲಿ ಡಿಎಸ್‌ಎಸ್ ತಾಲೂಕು ಘಟಕ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ 15ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಜಾತಿ, ಮತವನ್ನು ಪ್ರೀತಿಸುವ ವ್ಯಕ್ತಿ ನಿಜವಾದ ಹಿಂದೂವಾಗುತ್ತಾನೆ. ಪ್ರೊ.ಬಿ.ಕೃಷ್ಣಪ್ಪ ಅವರು ತಳಸಮುದಾಯದ ಅಭಿವೃದ್ಧಿಗೆ ಅವಿರತ ಹೋರಾಟ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪ ಅವರೂ ಮುಂಚೂಣಿಯಲ್ಲಿದ್ದರು. ಅಂತಹವರ ಮಾರ್ಗದರ್ಶನದಲ್ಲಿ ಸಂಘಟಕರು ಭಿನ್ನಾಭಿಪ್ರಾಯ ತೊರೆದು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಜಿಲ್ಲೆಯಲ್ಲಿ ಸಮಾಜವಾದಿ ಹೋರಾಟ ತನ್ನ ತೀವ್ರತೆಯನ್ನು ಕಳೆದುಕೊಂಡು ಜನರಲ್ಲಿ ಶೂನ್ಯಭಾವ ಆವರಿಸಿದ ಸಂದರ್ಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಲಿತರ ಪರವಾದ ಹೋರಾಟಕ್ಕೆ ಜೀವಕಳೆ ತುಂಬಿತು. ಬಿ.ಕೃಷ್ಣಪ್ಪ ಅವರು, ತಾಲೂಕಿನ ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ ಚನ್ನವೀರಪ್ಪ ಆಯೋಗ ಬೆತ್ತಲೆಸೇವೆ ನಿಷೇಧಿಸುವಂತೆ ವರದಿ ನೀಡಿತು ಎಂದು ತಿಳಿಸಿದರು.
ಶೇ 3ರಷ್ಟಿರುವ ಮುಂದುವರೆದ ಜನಾಂಗ ಶೇ97 ರಷ್ಟಿರುವ ಬಹುಸಂಖ್ಯಾತ ಬಡ, ಮಧ್ಯಮ ವರ್ಗದ ಜನರನ್ನು ಒಡೆದು ಆಳುತ್ತಿದೆ. ಯಾವುದೇ ಕಾಯ್ದೆ, ಕಾನೂನುಗಳನ್ನು ಜಾರಿಗೊಳಿಸಬೇಕಾದರೆ ವಿಧಾನಸಭೆ ಹಾಗೂ ಸಂಸತ್‌ನಲ್ಲಿ ಚರ್ಚೆ ಮಾಡಬೇಕು. ಆದರೆ ಇಂದು ಸುಗ್ರೀವಾಜ್ಞೆ ಮೂಲಕ ಬಲವಂತವಾಗಿ ಕಾಯ್ದೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸಂತ ಕುಗ್ವೆ ಹಾಗೂ ಲಕ್ಷ್ಮಣ ಕುಗ್ವೆ ಕ್ರಾಂತಿಗೀತೆ ಹಾಡಿದರು. ತಾಲೂಕು ಸಂಚಾಲಕ ಬಸವರಾಜಪ್ಪ ಹಶ್ವಿ, ಜನಪರ ಹೋರಾಟಗಾರ ಕೆ.ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಮತ್ತಿತರರಿದ್ದರು.

Ad Widget

Related posts

ಶಿವಮೊಗ್ಗದ ಬೇಡಿಕೆ ಪೂರೈಸಲಿರುವ ವಿಐಎಸ್‍ಎಲ್ ಆಮ್ಲಜನಕ ಘಟಕ

Malenadu Mirror Desk

ಬಹಿರಂಗ ಪ್ರಚಾರ ಅಂತಿಮ, ರೋಡ್‌ಶೋ ಮೂಲಕ ಗಮನ ಸೆಳೆದ ಅಭ್ಯರ್ಥಿಗಳು

Malenadu Mirror Desk

ಶಿವಮೊಗ್ಗ ನೂತನ ಡಿಸಿ ಸೆಲ್ವಮಣಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.