ಸಿದ್ದರಾಮೋತ್ಸವ ಮುಗಿದ ತಕ್ಷಣ ಕಾಂಗ್ರೆಸ್ ಎರಡು ಭಾಗವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಧೈರ್ಯವಿದ್ದರೆ ಅದನ್ನು ವಿರೋಧಿಸಬೇಕಿತ್ತು. ಅದನ್ನು ಬಿಟ್ಟು ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಉತ್ಸವ ಮಾಡಲು ಹೊರಟಿರುವುದು ಅವರ ಶಿಖಂಡಿತನ ತೋರಿಸುತ್ತದೆ. ಈಗಲೇ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಒಳಜಗಳ ಶುರುವಾಗಿದೆ ಎಂದರು.
ಚುನಾವಣೆಗೆ ನಿಂತರೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸೋಲುತ್ತಾರೆ. ಅಧಿಕೃತ ವಿರೋಧ ಪಕ್ಷದ ಅರ್ಹತೆಯನ್ನೂ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದರು.
ನಿರ್ದೇಶಕಿ ಲೀನಾ ಮಣಿಮೇಖಲೈ ಕಾಳಿಕಾ ಮಾತೆಯ ಕೈಗೆ ಸಿಗರೇಟ್ ಕೊಟ್ಟು ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಸರ್ವೇಜನ ಸುಖಿನೋಭವಂತು ಎಂದು ಹೇಳುತ್ತಾ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ಸಂಸ್ಕೃತಿ ನಮ್ಮದು. ಯಾರೋ ಒಬ್ಬರು ಅವಮಾನ ಮಾಡಿದಾಕ್ಷಣ ಕಾಳಿಕಾ ಮಾತೆಯನ್ನು ಪೂಜಿಸಿಕೊಂಡು ಬಂದವರ ಗೌರವ ಕಡಿಮೆಯಾಗುವುದಿಲ್ಲ ಎಂದರು.
ದುಷ್ಟ ಸಂಹಾರಕ್ಕೆ ಅವತಾರ ತಾಳಿದ ಕಾಳಿ ಮಾತೆ ಸರಿಯಾದ ಬುದ್ದಿ ನೀಡುತ್ತಾಳೆ. ಹಿಂದೂಗಳ ಆಕ್ರೋಶಕ್ಕೆ ಈಗಾಗಲೇ ಅದು ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಕೆಯನ್ನು ಬಂಧಿಸುವ ಸಂಭವವಿದೆ ಎಂದರು.
ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರಿಗೆ ರಾಜ್ಯಸಭೆಯ ನಾಮನಿರ್ದೇಶನ ಸದಸ್ಯತ್ವ ನೀಡಿರುವುದನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ರಾಜಕಾರಣ ಸಲ್ಲದು ಎಂದರು.


