Malenadu Mitra
ರಾಜ್ಯಶಿವಮೊಗ್ಗಸಾಗರಸೊರಬಹೊಸನಗರ

ಮಲೆನಾಡಿನಲ್ಲಿ ಸಂಭ್ರಮ ಸಡಗರದ ಗೌರಿ ಹಬ್ಬ, ತವರಿಗೆ ಬಂದು ತಾಯಿ ಗೌರಿಗೆ ಪೂಜೆ ಸಲ್ಲಿಸಿದ ಹೆಣ್ಣುಮಕ್ಕಳು

ಲೇಖನ :

ತಿಮ್ಮಪ್ಪ , ಶಿಕ್ಷಕರು
ವಿನಾಯಕ ನಗರ ರಿಪ್ಪನ್ ಪೇಟೆ

ಮಲೆನಾಡಿನ ಸಂಸ್ಕೃತಿಯ ಪ್ರತೀಕವಾದ ಗೌರಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗೌರಿ ಹಬ್ಬವೆಂದರೆ ಮಲೆನಾಡಿನಲ್ಲಿ ವಿಶಿಷ್ಟ ಆಚರಣೆ. ಮಲೆನಾಡು ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವ್ಯಾಪಕವಾಗಿರುವ ದೀವರ ಸಮುದಾಯದಲ್ಲಿ ಗೌರಿ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವವಿದೆ.

ವಿಶಿಷ್ಟ ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಈ ಸಮುದಾಯದ ಪ್ರತಿ ಮನೆಯಲ್ಲಿ ಬಾಳೆಮರ ಅಥವಾ ಮರದ ಮಂಟಪದಲ್ಲಿ ಹೊಳೆಯಿಂದ ಹೆಂಗಳೆಯರೆಲ್ಲಾ ಸೇರಿ ತರುವ ನೀರನ್ನೇ ಗೌರಮ್ಮ ಎಂದು ಪೂಜಿಸುತ್ತಾರೆ. ಮೂರು ದಿನಗಳ ಕಾಲ ಮನೆಯಲ್ಲಿ ಗೌರಿ ಹಬ್ಬ ಆಚರಿಸುವ ಅವರಲ್ಲಿ ತಾಯಿ ಪಾರ್ವತಿ ಗಂಡನೊಂದಿಗೆ ತೌರಿಗೆ ಹಬ್ಬಕ್ಕೆ ಬಂದಿದಾಳೆ ಎಂಬ ಶ್ರದ್ಧಾಭಕ್ತಿ ಇರುತ್ತದೆ. ತವರಿಗೆ ಬರುವ ಹೆಣ್ಣುಮಕ್ಕಳು ತರಾವರಿ, ಅಡುಗೆ , ಕಜ್ಜಾಯ, ಚಕ್ಕುಲಿ, ಅತ್ರಾಸು, ಕರಿಗಡಬು ಸೇರಿದಂತೆ ತರಾವರಿ ತಿನಿಸುಗಳನ್ನು ತಯಾರಿಸಿ ಗೌರಮ್ಮನಿಗೆ ಎಡೆ ಹಾಕುವುದು ಸಂಪ್ರದಾಯ.

ಮಂಗಳವಾರ ಸಂಜೆ ಮನೆಗೆ ಬಂದ ಗೌರಮ್ಮ ಗುರುವಾರ ಸಂಜೆ ತವರುಮನೆಯಿಂದ ಗಂಡನ ಮನೆಗೆ ಹೊರಡುತ್ತಾಳೆ. ಮೂರು ದಿನ ತೌರಿನಲ್ಲಿ ಸುಖವಾಗಿದ್ದ ಸಿರಿಗೌರಿಯನ್ನು ಭಾರವಾದ ಮನಸ್ಸಿನಲ್ಲಿಯೇ ಹೊಳೆಯ ನೀರಿನ ಮೂಲಕವೇ ಗಂಡನ ಮನೆಗೆ ಕಳಿಸುವ ಈ ಹಬ್ಬದೊಂದಿಗೆ ದೀವರ ಸಮುದಾಯ ಒಂದು ಭಾವನಾತ್ಮಕ ಹಾಗೂ ಪೂಜನೀಯ ಸಂಬಂಧ ಹೊಂದಿದೆ.

ಹೀಗೆ ತವರಿಗೆ ಬಂದ ಹೆಣ್ಣು ಮಕ್ಕಳು ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದ ದೃಶ್ಯ ಎಲ್ಲೆಡೆ ಕಂಡು ಬಂತು. ಈ ಬಾರಿ ಅತೀವೃಷ್ಟಿಯ ಕಾರಣಕ್ಕೆ ಬೆಳೆ ಹದವಾಗಿ ಬೆಳೆಯಲಾಗದಿದ್ದರೂ, ಹೆಣ್ಮಕ್ಕಳನ್ನು ತೌರಿಗೆ ಕರೆದು ಸತ್ಕರಿಸುವ ಈ ಹಬ್ಬವನ್ನು ಯಾವುದೇ ಅಡಚಣೆಯಾಗದಂತೆ ಮಾಡಿದ್ದಾರೆ.
ಹಿಂದೆ ಊರಿನ ಕೆರೆಗಳಲ್ಲಿ ಎಲ್ಲಾ ಕುಟುಂಬಗಳೂ ಕೂಡಿ ಗೌರಮ್ಮನನ್ನು ಬರಮಾಡಿಕೊಳ್ಳುವ ಮತ್ತು ವಿಸರ್ಜಿಸುವ ಪರಿಪಾಠವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿದೆ. ಸಾಗರ ಮತ್ತು ಸೊರಬ ಸೀಮೆಯಲ್ಲಿ ಈಗಲೂ ಈ ಸಂಭ್ರಮವನ್ನು ನಾವು ಕಾಣಬಹುದು. ಪೃಕೃತಿಯನ್ನೇ ದೇವರೆಂದು ಆರಾಧಿಸುವ ಮಲೆನಾಡಿಗರು ಗೌರಿ ಹಬ್ಬದಲ್ಲಿ ದೇವಿಗೆ ಅಲಂಕರಿಸಲು ಅರಣ್ಯದಲ್ಲಿಯೇ ಸಿಗುವ ಹೂವು ಹಣ್ಣುಗಳನ್ನು ತರುವುದು ವಿಶೇಷವಾಗಿದೆ.

ಗಂಡನ ಮನೆಯಲ್ಲಿಯೇ ಎಲ್ಲಾ ಹಬ್ಬ ಆಚರಿಸುವ ನಾನು ಗೌರಿ ಹಬ್ಬ ಮಾತ್ರ ತವರಿನಲ್ಲಿಯೇ ಮಾಡುವೆ. ಈ ಹಬ್ಬ ಮತ್ತು ತವರಿನ ಬಾಂದವ್ಯ ಆ ರೀತಿ ಇದೆ. ಇಂತಹ ಆಚರಣೆಗಳಿಂದ ಮಲೆನಾಡಿನ ಶ್ರೀಮಂತ ಸಂಸ್ಕೃತಿ ಉಳಿಯುತ್ತದೆ. ನಾವು ನಮ್ಮ ಮುಂದಿನ ಪರಂಪರೆಗೆ ಆಚರಣೆಯನ್ನು ತಲುಪಿಸುವ ಕೆಲಸ ಮಾಡಬೇಕಾಗಿದೆ. ನಿಜಕ್ಕೂ ಈ ಹಬ್ಬ ಅದ್ಭುತ ಅನುಭವ ನಮಗೆ. ತಾಯಿ ಗೌರವ್ವ ಎಲ್ಲಾ ಹೆಣ್ಣುಮಕ್ಕಳ ತೌರಿನಲ್ಲಿಯೂ ಸುಖ ಶಾಂತಿ ತರಲಿ ಎಂದು ಬೇಡುವೆ

ರೂಪ, ಸಾಗರ

Ad Widget

Related posts

ಮನೆಮನೆಗೆ ಗಂಗೆ ಯೋಜನೆಯಡಿ ಎಲ್ಲ ಹಳ್ಳಿಗಳಿಗೂ ನೀರು: ಸಚಿವ ಕೆ.ಎಸ್. ಈಶ್ವರಪ್ಪ

Malenadu Mirror Desk

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

Malenadu Mirror Desk

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ಸರಕಾರ: ಈಶ್ವರಪ್ಪ ಆರೋಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.