ಸೊರಬ: ಪರಿಸರ ವಿರೋಧಿ ಯೋಜನೆಗಳನ್ನು ಸರಕಾರ ಅನುಷ್ಠಾನಗೊಳಿಸಲು ಮುಂದಾದಲ್ಲಿ, ಜನರು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ಹಿಂಜರಿಯಬಾರದು ಎಂದು ಪಶ್ಚಿಮಘಟ್ಟ ಉಳಿಸಿ ಆಂದೋಲನ ಸಮಿತಿ ಅಧ್ಯಕ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಜೀವ ವೈವಿಧ್ಯ ಮಂಡಳಿ, ಜೀವ ವೈವಿಧ್ಯ ನಿರ್ವಹಣ ಸಮಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ, ವೃಕ್ಷಲಕ್ಷ ಆಂದೋಲನ ಸಮಿತಿ, ಪರಿಸರ ಜಾಗೃತಿ ಟ್ರಸ್ಟ್ ಸೊರಬ ವತಿಯಿಂದ ಮಂಗಳವಾರ ಹಮ್ಮಿಕೊಂಡ ಹಸಿರು ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1980ರ ಅರಣ್ಯ ಕಾಯ್ದೆಯಡಿ ಅರಣ್ಯ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಮಾಡುವ ಅಗತ್ಯವಿದೆ. ಇಂದು ಪಂರಂಪರೆಯ ಅರಣ್ಯಕ್ಕಿಂತ ಪ್ಲಾಂಟಶನ್ ಅರಣ್ಯಕ್ಕೆ ಒತ್ತು ನೀಡುತ್ತಿರುವುದು ಸರಿಯಲ್ಲ. ಪರಂಪರೆಯ ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡಿವೆ.1982 ರಿಂದ 2021ರ ವರೆಗೆ ಕೇವಲ ಶೇ ೫ರಷ್ಟು ಮಾತ್ರ ಅರಣ್ಯ ಬೆಳೆಸಲಾಗಿದ್ದು, ದೇಶದಲ್ಲಿ ಒಟ್ಟು ಅರಣ್ಯ ಪ್ರವೇಶ ಕೇವಲ 24ರಷ್ಟಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.
ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಪರಿಸರಸಕ್ಕೆ ಹೊಂದಿಕೊಳ್ಳುವ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು. ಕಿರು ಅರಣ್ಯ ಉತ್ಪನ್ನಗಳಿಗೆ ಆದ್ಯತೆ ನಿಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುವಂತಿರಬೇಕು. ವಿಶ್ವವಿದ್ಯಾಲಯದಲ್ಲಿ 320 ಜಾತಿಯ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಬಗ್ಗೆ ಜನರು ಅರಿವು ಪಡೆದುಕೊಳ್ಳಬೇಕು ಎಂದರು.
ಸಮಾವೇಶದ ನಿರ್ಣಯಗಳು
ಗೋಮಾಳ, ಕಾನು, ದೇವರ ಕಾಡು, ಸೊಪ್ಪನ ಬೆಟ್ಟ, ಕೆರೆ ಮುಂತಾದ ಗ್ರಾಮ ನೈಸರ್ಗಿ ಸಂಪತ್ತಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರಕಾರ ರೈತರ ಸಹಭಾಗಿತ್ವದಲ್ಲಿ ವಿಶೆಷ ಯೋಜನೆ ರೂಪಿಸಬೇಕು. ತಾಲೂಕಿನಲ್ಲಿ ಕೆರೆಗಳ ಸಂರಕ್ಷಣೆ, ಬಸ್ತಿಕೊಪ್ಪ, ಕುಂಬತ್ತಿಯಲ್ಲಿ ಅಕ್ರಮ ಗಣಿಗಾರಿಗೆ ನಿಷೇಧಿಸಬೇಕು. ಅರಣ್ಯ ಇಲಾಖೆ ಹಣ್ಣು ಹಾಗೂ ಸ್ಥಳೀಯ ಜಾತಿ ಮರಗಿಡಗಳನ್ನು ಬೆಳೆಸುವುದು. ಡೀಮ್ ಅರಣ್ಯ ರಕ್ಷಣಾ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆ ರೂಪಿಸಬೇಕು ಸೇರಿದಂತೆ ಇನ್ನಿತರೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೃಕ್ಷಲಕ್ಷ ಆಂದೋಲನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಸಾಗರ ಜೀವ ವೈವಿಧ್ಯ ಸಮಿತಿಯ ಕೆ.ವೆಂಕಟೇಶ್, ಕಾಡು ರಕ್ಷಣಾ ಸಮಿತಿ ಅಧ್ಯಕ್ಷ ರಾಜಾರಾಂ, ಎಂ.ಆರ್.ಪಾಟೀಲ್, ರಘನಂದನ್ ನೆರೂರು, ಛತ್ರಪತಿಗೌಡ, ಎ.ಎಲ್.ಅರವಿಂದ್ ಆನವಟ್ಟಿ, ಅನಂತರಾಮ್, ತಾ.ಪಂ ಇಒ ಟಿ.ನಾಗರಾಜ್ ಅನ್ವೇಕರ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಬಿಎನ್ಸಿ ರಾವ್, ಗಣಪತಿ ಕೆ.ಬಿಸಲುಕೊಪ್ಪ, ವಿನೋದ್ ವಾಲ್ಮೀಖಿ, ಡಿ.ಎಂ.ಸೀಮಾ ಸೇರಿದಂತೆ ಪಿಡಿಒಗಳು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳಿದ್ದರು.
previous post


