ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅವ್ಯವಸ್ಥೆ ಸರಿಪಡಿಸಿ, ಅಕ್ರಮಗಳ ತಡೆಗೆ ಆಗ್ರಹಿಸಿ ಎನ್ಎಸ್ಯುಐ ವತಿಯಿಂದ ಶಂಕರಘಟ್ಟದ ಕುವೆಂಪು ವಿವಿಗೆ ಮುತ್ತಿಗೆ ಹಾಕಲಾಯಿತು.
ರಾಜ್ಯದಲ್ಲಿ ಕುವೆಂಪು ವಿವಿಗೆ ಒಳ್ಳೆಯ ಹೆಸರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಯಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಗಳಿಂದ ವಿವಿ ಗೌರವಕ್ಕೆ ಧಕ್ಕೆಯಾಗುತ್ತಿರುವುದಲ್ಲದೆ, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಆತಂಕವಾಗುತ್ತಿದ್ದು, ಇದನ್ನು ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಹಲವು ಬಾರಿ ನಾವು ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಅತಿಥಿ ಉಪನ್ಯಾಸಕರ ನೇಮಕದಲ್ಲಿ ನಿಯಾವಳಿಗಳನ್ನು ಗಾಳಿಗೆ ತೂರಲಾಗಿದೆ. ವಿದ್ಯಾರ್ಥಿ ವೇತನ ನುಂಗಿ ಹಾಕಲಾಗಿದೆ. ಲ್ಯಾಪ್ ಟ್ಯಾಪ್ ಕಳುವಿನ ಆರೋಪ ಇರುವವರನ್ನು ಹಣಕಾಸು ವಿಭಾಗದ ಮುಖ್ಯಸ್ಥನನ್ನಾಗಿಸಿ ಮತ್ತು ಭ್ರಷ್ಟಾಚಾರ ಎಸಗಲು ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.
ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ, ಪೀಠೋಪಕರಣಗಳ ಕೊರತೆ ಇದೆ, ದುರಸ್ತಿಗೆ ಬಿದ್ದಿರುವ ಜೆರಾಕ್ಸ್ ಯಂತ್ರಗಳ ಕೊರತೆ, ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕಟ್ಟಡದ ದುರಸ್ತಿ ಇದ್ದು, ತರಗತಿಯಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಗೆ ಗಮನ ಕೊಡಲು ಸಾಧ್ಯವಾಗುತಿಲ್ಲ ಎಂದರು.
ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಬೇಕು. ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು. ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು
ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಭ್ರಷ್ಟಾಚಾರಿಗಳ ವಜಾ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಜಿಲ್ಲಾಧ್ಯಕ್ಷ ವಿಜಯ್ಕುಮಾರ್, ಕಾಂಗ್ರೆಸ್ ಯುವ ಮುಖಂಡರಾದ ಮುರುಗೇಶ್, ರವಿಕುಮಾರ್, ಹರ್ಷಿತ್, ರವಿ ಕಾಟಿಕೆರೆ, ಧವನ್ ರಾಜ್, ನಿಸಾರ್, ಸಾಗರ್ ಕಂಡ್ರೆ, ಚರಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು
next post


