Malenadu Mitra
ರಾಜ್ಯಶಿವಮೊಗ್ಗ

ಅಡಕೆ ಬೆಳೆ ಸಂಕಷ್ಟ ಪರಿಹಾರಕ್ಕೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಲಿ: ಮಂಜುನಾಥ್‌ಗೌಡ ಆಗ್ರಹ

ಶಿವಮೊಗ್ಗ: ಅಡಕೆ ಬೆಳೆಗೆ ಹಳದಿ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಹಾಗೂ ಅಡಕೆ ಧಾರಣೆ ಇಳಿಮುಖವಾಗುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಆಗ್ರಹಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕಳೆದ ೧ ವಾರದಿಂದ ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದರು.
ಅದೇರೀತಿ ಅಡಿಕೆ ಧಾರಣೆಯೂ ಸಹ ಇಳಿಮುಖವಾಗುತ್ತಿದೆ. ಒಂದು ವಾರದ ಹಿಂದೆ ಕ್ವಿಂಟಾಲಿಗೆ ೫೭ ಸಾವಿರ ರೂ. ಇದ್ದದ್ದು ಈಗ ೫೪ ಸಾವಿರ ರೂ.ಗಳಿಗೆ ಇಳಿದಿದೆ. ಇದಕ್ಕೆ ಗುಟ್ಕಾ ಕಂಪೆನಿಗಳ ಲಾಬಿ ಕಾರಣವಾಗಿದೆ. ಹಾಗೆಯೇ ಬೇಡಿಕೆಗೆ ತಕ್ಕಂತೆ ಅಡಿಕೆ ಇಲ್ಲದಿದ್ದರೂ ಕೂಡ ಬೆಲೆಯಲ್ಲಿ ಏರಿಕೆ ಆಗಿಲ್ಲ. ಜಿಲ್ಲೆಯಲ್ಲಿ ತಿಂಗಳಿಗೆ ೬ ಲಕ್ಷ ಮೂಟೆ ಇರಬೇಕಾಗಿತ್ತು. ಈಗ ಅದು ೩ರಿಂದ ಮೂರೂವರೆ ಲಕ್ಷ ಕ್ವಿಂಟಾಲ್ ಮಾತ್ರ ಇದೆ. ಹಾಗೂ ಮುಂದಿನ ಮೂರು ತಿಂಗಳಿಗೆ ೧೦ ಲಕ್ಷ ಮೂಟೆ ಬೇಕಾಗುತ್ತದೆ. ಹಳದಿ ರೋಗ ಹಾಗೂ ಬಿಸಿಲಿನಿಂದ ಅಡಿಕೆ ಹಿಂಗಾರು ಬೆಳೆ ಕಡಿಮೆಯಾಗಿದೆ ಎಂದರು.

ತೀರ್ಥಹಳ್ಳಿಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಳದಿ ಚುಕ್ಕಿ ರೋಗಕ್ಕೆ ಮೈಲುತುತ್ತ ಸುಣ್ಣ ಬಳಸಿ ಎಂದು ಹೇಳುತ್ತಿದ್ದಾರೆಯೇ ಹೊರತು ಪರ್ಯಾಯ ಹಾಗೂ ಶಾಶ್ವತವಾದ ಔಷಧಿಯನ್ನು ಇದುವರೆಗೆ ಕಂಡುಹಿಡಿದಿಲ್ಲ. ಕೇಂದ್ರ ಸರ್ಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ಕೂಡಲೇ ಮಧ್ಯ ಪ್ರವೇಶ ಮಾಡಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು ಎಂದ ಅವರು, ಅಡಿಕೆ ಬೆಳೆಯೊಂದರಿಂದಲೇ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಜಿಎಸ್ಟಿ ಸಿಗುತ್ತಿದ್ದರೂ ನೂರು ಕೋಟಿ ರೂ.ನಲ್ಲಿ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಆಗುತ್ತಿಲ್ಲ ಎಂದರು.

ಅಡಿಕೆ ಬೆಳೆಗೆ ಹಳದಿ ರೋಗ ಹರಡುತ್ತಿರುವುದು ಹಾಗೂ ಬೆಲೆ ಕುಸಿತದ ಬಗ್ಗೆ ರಾಜ್ಯಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದ ನಿಯೋಗವು ಕೃಷಿ ಮತ್ತು ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿದೆ. ಬೆಲೆ ಕುಸಿತದಿಂದ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗಬಾರದು. ಖರೀದಿದಾರರು ಖರೀದಿಯನ್ನು ನಿಲ್ಲಿಸಬಾರದು. ಕ್ಯಾಂಪ್ಕೊ ಮತ್ತು ಮ್ಯಾಮ್ಕೋಸ್ ಸಂಸ್ಥೆಗಳು ರೈತರ ನೆರವಿಗೆ ಬರಬೇಕು ಎಂದ ಅವರು, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿರುವುದಕ್ಕೆ ರಾಜ್ಯಸರ್ಕಾರಕ್ಕೆ ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಷಡಾಕ್ಷರಿ, ರಮೇಶ್ ಶೆಟ್ಟಿ ಶಂಕರಘಟ್ಟ, ಕೆ.ಎಲ್. ಜಗದೀಶ್, ಪಿ.ಒ. ಶಿವಕುಮಾರ್, ದುಗ್ಗಪ್ಪ ಗೌಡ, ವೈ.ಬಿ. ಚಂದ್ರಕಾಂತ್, ದಶರಥ್ ಗಿರಿ, ಜಿ.ಡಿ. ಮಂಜುನಾಥ್, ಮಂಜಪ್ಪ, ಮೋಹನ್, ಎಂ.ಎಸ್. ಸಿದ್ದಪ್ಪ, ಎಂ.ಕೆ. ವಿಜೇಶ್ ಇನ್ನಿತರರು ಉಪಸ್ಥಿತರಿದ್ದರು.

Ad Widget

Related posts

ಬೆಂಗಳೂರಲ್ಲಿ ಜಲಪಾತ ಸೃಷ್ಟಿ, ಎಲ್ಲಿ ಗೊತ್ತಾ ?

Malenadu Mirror Desk

ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ದ : ಬಸವರಾಜ ಬೊಮ್ಮಾಯಿ

Malenadu Mirror Desk

28 ವಿದ್ಯಾರ್ಥಿಗಳಿಗೆ 35 ಚಿನ್ನದ ಪದಕ :ಭಾರತ್ ಬಯೊಟೆಕ್ ಸಂಸ್ಥಾಪಕ ಡಾ.ಕೃಷ್ಣಮೂರ್ತಿಗೆ ಗೌರವ ಡಾಕ್ಟರೇಟ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.