ಶಿವಮೊಗ್ಗ,ಆ.೮: ಸಾಗರ ತಾಲೂಕು ಸಿರಿವಂತೆಯ ಕಲಾಕುಟೀರ ಸಿರಿವಂತೆಯ ಚಿತ್ರಸಿರಿಗೆ ಚಿಂತಕ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಸೋಮವಾರ ಭೇಟಿ ನೀಡಿದ್ದರು. ಚಿತ್ರಸಿರಿಯ ಸಿರಿವಂತೆ ಚಂದ್ರಶೇಖರ್ ಅವರಿಂದ ದೀವರ ಅಸ್ಮಿತೆಯಾದ ಹಸೆ ಚಿತ್ತಾರ, ಬೂಮಣ್ಣಿ ಬುಟ್ಟಿ ಚಿತ್ತಾರಗಳ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭ ಚಂದ್ರಶೇಖರ್ ಅವರ ವಿಶಿಷ್ಟ ಕಲೆಯಾದ ಭತ್ತದ ಹಾರ ಮತ್ತು ಭತ್ತದ ತೆನೆ ತೋರಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಂದ್ರ ಶೇಖರ್ ಅವರು ಹಸೆ ಚಿತ್ತಾರ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಪ್ರಕಾಶ್ ರಾಜ್ ಪ್ರಶಂಸಿಸಿದರು. ಕೆ.ಎಲ್.ಅಶೋಕ್, ಕಬಸೆ ಅಶೋಕ್ ಮೂರ್ತಿ ಈ ಸಂದರ್ಭ ಹಾಜರಿದ್ದರು.
ಕೋಳಿಕಜ್ಜಾಯ ಸವಿದ ನಟ:

ಮಲೆನಾಡಿನ ಅದರಲ್ಲೂ ದೀವರ ಆಹಾರ ಸಂಸ್ಕೃತಿಯ ಪ್ರತೀಕವಾದ ಕೋಳಿ ಕಜ್ಜಾಯವನ್ನು ಬೆಳಗಿನ ತಿಂಡಿಯಾಗಿ ಸವಿದ ನಟ ಪ್ರಕಾಶ್ ರಾಜ್ ಈ ಮಲೆನಾಡಿನ ಆತಿಥ್ಯ ಮತ್ತು ಆಹಾರ ಸಂಸ್ಕೃತಿ ಶ್ರೀಮಂತವಾದದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಾಗರದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಆಹಾರ ಮೇಳದಲ್ಲಿ ಕೋಳಿ ಕಜ್ಜಾಯ ಮಾಡಿರುವುದಕ್ಕೆ ಅಲ್ಲಿನ ಅಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೊಳಗಾಗುತ್ತಿರುವ ಸಂದರ್ಭದಲ್ಲಿಯೇ ಕಾಕತಾಳೀಯ ಎಂಬಂತೆ ದಕ್ಷಿಣ ಭಾರತದ ದೊಡ್ಡ ಸೆಲೆಬ್ರಿಟಿಯೊಬ್ಬರು ಕೋಳಿ ಕಜ್ಜಾಯ ಸವಿದಿರುವ ಫೋಟೋಗಳು ವೈರಲ್ ಆಗಿವೆ.


