Malenadu Mitra
ರಾಜ್ಯಶಿವಮೊಗ್ಗ

ಅಡಿಕೆ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ: ಡಾ.ಸೆಲ್ವಮಣಿ ಆರ್

ಶಿವಮೊಗ್ಗ: ಅಡಿಕೆಯ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಾಕಷ್ಟು ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ರೈತರಿಗೆ ಸಲಹೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರಗಳು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನವುಲೆಯ ಕೃಷಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ಅಡಿಕೆ ಮೌಲ್ಯವರ್ಧಿತ ಉತ್ಪನ್ನ’ ಗಳ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಡಿಕೆ ಸಿಪ್ಪೆ ಕೂಡ ತ್ಯಾಜ್ಯವಲ್ಲ. ಅದನ್ನು ಎಲ್ಲೆಂದರಲ್ಲಿ ಹಾಕದೆ, ಸುಡದೆ, ಸಿಪ್ಪೆ ಬಗ್ಗೆ ಸಹ ಕಾಳಜಿ ತೋರಿ ಗೊಬ್ಬರ ತಯಾರಿಸಬಹುದು. ನಮ್ಮ ಜಿಲ್ಲೆಯಲ್ಲಿ ಸುಮಾರು ೧೦೦ ವರ್ಷಗಳಿಂದ ಅಡಿಕೆಯನ್ನು ಬೆಳೆಯಲಾಗುತ್ತಿದೆ. ರೈತರು ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸಿ ಬೆಳೆ ಬೆಳೆಯುತ್ತಿದ್ದಾರೆ. ವಿಜ್ಞಾನಿಗಳು ಅಡಿಕೆಯ ಉತ್ತಮ ತಳಿ, ರೋಗ ನಿರ್ವಹಣೆ ಕುರಿತು ಹೆಚ್ಚು ಅಧ್ಯಯನ ಮಾಡಿ ರೈತರು ಒಳ್ಳೆಯ ಇಳುವರಿ ಪಡೆಯಲು ಸಹಕರಿಸಬೇಕು ಸಿಗಬೇಕು ಎಂದರು.

ಅಡಿಕೆ ಮೌಲ್ಯವರ್ಧನೆಗೆ ಸಾಕಷ್ಟು ಅವಕಾಶಗಳು, ಸಾಧ್ಯತೆಗಳಿವೆ ಎಂದು ಯುವ ಉದ್ಯಮಿಗಳು ತೋರಿಸಿದ್ದಾರೆ. ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ದಿ ಇಲಾಖೆ, ಬ್ಯಾಂಕ್ ಲಿಂಕೇಜ್, ಸಾಲ ಸೌಲಭ್ಯ ಸೇರಿದಂತೆ ಅಗತ್ಯ ಸಹಕಾರವನ್ನು ವಿಶ್ವವಿದ್ಯಾಲಯಕ್ಕೆ ನೀಡಲು ಸಿದ್ದವಿದ್ದು ಉಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಮಾಡಿ ಹೆಚ್ಚು ಜನರನ್ನು ತಲುಪಬೇಕೆಂದರು.
ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರವಿ ಭಟ್ ಮಾತನಾಡಿ, ಅಡಿಕೆ ಇಳುವರಿ ಹೆಚ್ಚುವುದು, ಉತ್ತಮ ತಳಿ ಹಾಕುವುದು, ವೈಜ್ಞಾನಿಕ ಬೆಳೆ ಬೆಳೆಯುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಉತ್ತಮ ಆದಾಯ ಪಡೆಯುವುದು ಇದೆಲ್ಲವೂ ಸಹ ಅಡಿಕೆಯ ಮೌಲ್ಯವರ್ಧನೆ ಆಗುತ್ತದೆ.

ಮೇಘಾಲಯದಲ್ಲಿ ಒಂದು ತಂಡ ಶೇ.೬೦ ಅಡಿಕೆ ಸಿಪ್ಪೆ ಬಳಸಿ ಬಟ್ಟೆ ತಯಾರಿಸಿದೆ. ಅಡಿಕೆ ಸಿಪ್ಪೆ/ಸೋಗೆ ಬಳಸಿ ಅಣಬೆ ಬೆಳೆಯಲಾಗುತ್ತಿದೆ, ಅಡಿಕೆ ಸಿಪ್ಪೆ, ಸೋಗೆಯಿಂದ ಗೊಬ್ಬರ ಮಾಡಬಹುದು. ಅಡಿಕೆಯಲ್ಲಿ ಔಷಧೀಯ ಗುಣಗಳು ಕೂಡ ಹೆಚ್ಚಿರುವುದು ಕಂಡು ಬಂದಿದೆ. ಸಕ್ಕರೆ ಖಾಯಿಲೆ ನಿಯಂತ್ರಣಕ್ಕೂ ಅಡಿಕೆ ಸಹಕಾರಿಯಾಗಿದ್ದು ವಿಶಿಷ್ಟ ಅಂಶಗಳನ್ನು ಹೊಂದಿರುವ ಅಡಿಕೆ ಮೌಲ್ಯವರ್ಧನೆಯಿಂದ ರೈತರು ಹೆಚ್ಚು ಆದಾಯ ಗಳಿಸಬಹುದು ಎಂದರು.

ಕ್ಯಾಲಿಕಟ್‌ನ ಡಿಎಎಸ್‌ಡಿ ಉಪನಿರ್ದೇಶಕಿ ಡಾ.ಫೆಮಿನಾ ಮಾತನಾಡಿ, ಅಡಿಕೆ ಕುರಿತಾದ ಸಂಶೋಧನೆಗಳು ಹೆಚ್ಚಾಗಬೇಕು. ಅಡಿಕೆ ಕುರಿತು ವ್ಯಾಪಕ ಅಧ್ಯಯನ ಮಾಡಲು ರಚನೆಯಾದ ರಾಷ್ಟ್ರೀಯ ವಿಜ್ಞಾನ ಸಮಿತಿಯು ಅಡಿಕೆ ಬಳಕೆ ಕುರಿತು ಮೂರು ಮುಖ್ಯ ಅಂಶಗಳ ಕಡೆ ಗಮನ ಹರಿಸಿದೆ. ಅಡಿಕೆಯ ಔಷಧೀಯ ಉಪಯೋಗಗಳು, ಮಾನವನ ಆರೋಗ್ಯದ ಮೇಲೆ ಅಡಿಕೆಯ ಪ್ರಭಾವ ಹಾಗೂ ಅಡಿಕೆಯ ವಿತರಣೆ ಮತ್ತು ಬಳಕೆ ಇವುಗಳ ಅಧ್ಯಯನ ನಡೆಸುತ್ತಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣ ತಯಾರಿಕೆ ಕೂಡ ಒಂದು ಉತ್ತಮ ಬೆಳವಣಿಗೆಯಾಗಿದ್ದು, ತಾಂತ್ರಿಕತೆಯಿಂದ ಅಡಿಕೆಯ ಮೌಲ್ಯವರ್ಧನೆ ಹೆಚ್ಚಿಸುವಲ್ಲಿ ಗಮನ ಹರಿಸಬೇಕೆಂದರು.
ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ನಾಗರಾಜಪ್ಪ ಅಡಿವಪ್ಪರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೆ.ನಾಗರಾಜ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ್, ಡಾ.ಪ್ರದೀಪ್ ಎಸ್, ಡಾ.ಕೆ.ಟಿ.ಗುರುಮೂರ್ತಿ, ಡಾ.ತಿಪ್ಪೇಶ್, ಡಾ.ಆರ್.ಗಣೇಶ್ ನಾಯ್ಕ್, ಅಡಿಕೆ ಪತ್ರಿಕೆಯ ಶ್ರೀಪಡ್ರೆ, ರೈತರು, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು

Ad Widget

Related posts

ಬಜೆಟ್‌ನಲ್ಲಿ ನೀರಾವರಿಗೆ ಆದ್ಯತೆ

Malenadu Mirror Desk

ಕುಲಪತಿಯಿಲ್ಲದ ಕುವೆಂಪು ವಿವಿ, ಅಧಿಕಾರ ಹಸ್ತಾಂತರಿಸದೆ ಬಿಡುಗೆಹೊಂದಿದ ನಿರ್ಗಮಿತ ಕುಲಪತಿ!

Malenadu Mirror Desk

ಯೋಗ ಮಾಡುವಾಗ ಹೃದಯಾಘಾತ: ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.