Malenadu Mitra
ರಾಜ್ಯಶಿವಮೊಗ್ಗ

ಯಾವತ್ತೂ ನೊಂದವರ ಪರ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಭಿಪ್ರಾಯ

ಕಷ್ಟದಲ್ಲಿರುವವರಿಗೆ ನೆರವಾಗುವುದೆ ಕಾಂಗ್ರೆಸ್ ಸಂಸ್ಕೃತಿ ಎಂದು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ತ್ಯಾವರೇಕೊಪ್ಪದ ಬಳಿಯಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಐಸೋಲೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಕಾಂಗ್ರೆಸ್ ಪಕ್ಷದ ವತಿಯಿಂದ ಜನರಿಗೆ ಸಹಾಯ ನೀಡಲಾಗುತ್ತಿದೆ. ಕೊರೊನಾ ೨ನೇ ಅಲೆಯ ಮುನ್ಸೂಚನೆ ನೀಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ೨೦೨೧ರ ಮಾರ್ಚ್ ೭ರಂದೇ ಜನರ ನೆರವಿಗೆ ಮುಂದಾಗುವಂತೆ ಆದೇಶಿಸಿದ್ದರು. ಅದರಂತೆ ಸೋಂಕಿತರಿಗೆ ಬೆಡ್, ಆಕ್ಸಿಜನ್, ನಿರ್ಗತಿಕರಿಗೆ – ಬಡವರಿಗೆ ಆಹಾರ ಒದಗಿಸುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡುತ್ತಿದೆ ಎಂದರು.


ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪುನರ್ವಸತಿ ಕೇಂದ್ರದ ಎಲ್ಲ ನಿವಾಸಿಗಳಿಗೆ ವ್ಯಾಕ್ಸಿನ್ ಹಾಕಿಸಿರುವುದನ್ನು ಪ್ರಶಂಸಿದರು.
ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಿ.ಎಂ. ಸಂದೀಪ್ ಮಾತನಾಡಿ, ಕೊರೊನಾ ೨ನೇ ಅಲೆ ಅನೇಕ ಸಾವುನೋವಿಗೆ ಕಾರಣವಾಗಿದೆ. ಜಗತ್ತಿನಾದ್ಯಂತ ಜನ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಜನರ ನೋವಿಗೆ ಸ್ಪಂದಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕೋವಿಡ್ ಮಹಾಮಾರಿ ವಿರುದ್ಧ ಪ್ರತಿಯೊಬ್ಬರಿಗೂ ಸೇವೆ ಮಾಡುತ್ತಿರುವ ಬಿ.ವಿ. ಶ್ರೀನಿವಾಸ್, ಕಾಂಗ್ರೆಸ್ ಕೇವಲ ರಾಜಕಾರಣಕ್ಕಲ್ಲ, ಸೇವೆಗೂ ಇದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.


ಮಾಜಿ ಸ್ಬೂಡಾ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ದೇಶದಲ್ಲಿ ಆಕ್ಸಿಜನ್‌ಗೆ ಮತ್ತೊಂದು ಹೆಸರು ಬಿ.ವಿ. ಶ್ರೀನಿವಾಸ್. ಬಡತನದಿಂದ ಬಂದ ಅವರು ಬಡವರ ಕಷ್ಟ ಅರಿತುಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಬರಲಿ ಎಂದರು.

ಆಹಾರ ಕಿಟ್ ವಿತರಣೆ

ನಿರಾಶ್ರಿತ ಪುನರ್ವಸತಿ ಕೇಂದ್ರದ ೨೫೦ಕ್ಕೂ ಹೆಚ್ಚು ನಿವಾಸಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿವರ್ಧಕ ಕಿಟ್‌ಗಳನ್ನು ಮೇಲ್ವಿಚಾರಕ ಅನಿಲ್‌ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು. ನಂತರ ಸಾಗರ ರಸ್ತೆಯ ಹರ್ಷ ಹೋಟೆಲ್ ಹಿಂಭಾಗದಲ್ಲಿರುವ ಅಲೆಮಾರಿ ಸಮುದಾಯದವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಪುನರ್ವಸತಿ ಕೇಂದ್ರದ ೨೫೦ಕ್ಕೂ ಹೆಚ್ಚು ನಿವಾಸಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿವರ್ಧಕ ಕಿಟ್‌ಗಳನ್ನು ವಿತರಿಸಲಾಯಿತು.
ನಗರಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ಯುವ ಮುಖಂಡರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಗಣೇಶ್, ಮೊಹಮ್ಮದ್ ನಿಹಾಲ್, ಆದರ್ಶ ಹುಂಚದಕಟ್ಟೆ, ಪ್ರದೀಪ್, ವಿನಾಯಕ್ ಸೇರಿದಂತೆ ಹಲವರಿದ್ದರು.


ಔಷಧದ ಮೇಲಿನ ತೆರಿಗೆ ರದ್ದಾಗಲಿ

ಕೊರೊನಾಗೆ ಸಂಬಂಧಿಸಿದ ಎಲ್ಲಾ ಔಷಧಿಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸುವಂತೆ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನದಿಂದಾಗಿ ಕೆಲಸ ಇಲ್ಲದೆ ಜನರ ಬಳಿ ಹಣ ಇಲ್ಲ. ಇಂತಹ ಆಪತ್ತಿನ ಕಾಲದಲ್ಲಿ ಔಷಧಗಳ ಮೇಲೆ ತೆರಿಗೆ ಹಾಕುತ್ತಿರುವುದು ಸರಿಯಲ್ಲ. ಸರಕಾರ ದೇಶದಲ್ಲಿ ಉತ್ಪಾದಿಸಿದ ಲಸಿಕೆಯನ್ನು ಅನ್ಯ ದೇಶಗಳಿಗೆ ರಫ್ತುಮಾಡುತ್ತಿದೆ. ಆದರೆ ಇಲ್ಲಿನ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಶ್ರೀನಿವಾಸ್ ಆರೋಪಿಸಿದರು.

Ad Widget

Related posts

ಬಿಜೆಪಿ ಚುನಾವಣೆ ವ್ಯಾಮೋಹದಿಂದ ಕೊರೊನ ಹೆಚ್ಚಳ: ಕಾಂಗ್ರೆಸ್

Malenadu Mirror Desk

ಬ್ಯಾರಿಮಹಲ್ ಮೇಲೆ ನಿಮಗೇಕಿಷ್ಟು ಪ್ಯಾರ್ ?, ಪಾಲಿಕೆಯಲ್ಲಿ ಮೇಯರ್, ಕಮೀಷನರ್ ಮಾತಿಗೆ ಬೆಲೆ ಇಲ್ಲವೆ ?

Malenadu Mirror Desk

ಹಣ ಕಟ್ಟದಿದ್ದರೆ ಹೊಸಬರಿಗೆ ಆಶ್ರಯಮನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.