12 ಕೋಟಿ ವೆಚ್ಚದ ಸರಕಾರಿ ನೌಕರರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂಸದರು
ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನಿರ್ಮಿಸಲಿರುವ 12 ಕೋಟಿ ರೂ. ವೆಚ್ಚದ ನೌಕರರ ಭವನ ಸರಕಾರಿ ನೌಕರರ ಇತಿಹಾಸಲ್ಲಿಯೇ ಒಂದು ಮೈಲುಗಲ್ಲಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ನಗರದ ಕೆ.ಇ.ಬಿ.ವೃತ್ತದಲ್ಲಿ ಬುಧವಾರ ಹಳೆಯ ನೌಕರರ ಭವನದ ಆವರಣದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದ ನಂತರ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ದಶಕಗಳ ಅವಧಿಯಲ್ಲಿ ನೌಕರರ ಸಂಘವು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಮತ್ತು ಅವಲಂಬಿತರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ನೇತೃತ್ವ ವಹಿಸಿದ ಸಂಘದ ಪದಾಧಿಕಾರಿಗಳೆಲ್ಲರ ಶ್ರಮ ಮೆಚ್ಚುವಂತದ್ದಾಗಿದೆ ಎಂದವರು ಹೇಳಿದರು.
ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಕಾಮಗಾರಿ ಮುಂದಿನ 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ ಅವರು, ನೌಕರರು ಸರ್ಕಾರ ಮತ್ತು ರಾಜ್ಯದ ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೌಕರರ ಕಾರ್ಯ ಮಹತ್ವದ್ದಾಗಿದೆ. ಸರ್ಕಾರವೂ ಕೂಡ ತನ್ನ ಆದಾಯದ ಬಹುಪಾಲನ್ನು ಆಡಳಿತ ವ್ಯವಸ್ಥೆಗೆ ವಿನಿಯೋಗಿಸುತ್ತಿದೆ ಎಂದವರು ನುಡಿದರು.
ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಷಡಾಕ್ಷರಿ ಅವರು, ಭವನ ರೂಪು ರೇಷೆ, ನೌಕರರ ಕುಟುಂಬ ವರ್ಗದವರಿಗೆ ಆಯೋಜಿಸಿರುವ ಲಸಿಕೆ ಅಭಿಯಾನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ನೌಕರರ ಬದುಕು ಕೂಡ ಹಸನಾಗಬೇಕು
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ, ಜೀವಮಾನವಿಡೀ ತಮ್ಮ ಅಮೂಲ್ಯ ಸಮಯವನ್ನು ಕಚೇರಿಯಲ್ಲಿಯೇ ಕಳೆದು ನಿವೃತ್ತರಾಗುವ ನೌಕರರ ಬದುಕು ಕೂಡ ಹಸನಾಗಬೇಕು. ಅವರು ತಮ್ಮ ನಿವೃತ್ತಿಯ ಜೀವನವನ್ನು ನೆಮ್ಮದಿಯಿಂದ ಕಳೆಯುವಂತಾಗಬೇಕು. ಅದಕ್ಕಾಗಿ ಸರ್ಕಾರವು ಘೋಷಿಸಿ, ಅನುಷ್ಠಾನಕ್ಕೆ ತಂದಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಜ್ಯೋತಿ ಪ್ರಕಾಶ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಸೂಡಾ ಆಯುಕ್ತ ಎಂ.ಕರಭೀಮಣ್ಣನವರ್,ಡಿಎಚ್ಒ ಡಾ. ರಾಜೇಶ್ ಸುರಗೀಹಳ್ಳಿ, ಡಾ. ನಾಗರಾಜ ನಾಯ್ಕ್, ರಾಜ್ಯ ಸಂಘದ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ, ಕೋಶಾಧ್ಯಕ್ಷ ಶ್ರೀನಿವಾಸ್ ಮತ್ತಿತರರಿದ್ದರು.


