Malenadu Mitra
ರಾಜ್ಯಶಿವಮೊಗ್ಗ

ಕೋವಿಡ್ ಕೇರ್ ಸೆಂಟರ್ ಹೆಚ್ಚಿಸಿ: ಶ್ರೀಕಾಂತ್

ಶಿವಮೊಗ್ಗದಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದ್ದು, ಜನರ ಆತಂಕಕ್ಕೆ ಸ್ಪಂದಿಸಲು ಮೊರಾರ್ಜಿ ಶಾಲೆಗಳನ್ನು, ಹಾಸ್ಟೆಲ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸುವಂತೆ ಸಂಸದರು, ಉಸ್ತುವಾರಿ ಸಚಿವರಿಗೆ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿವಮೊಗ್ಗ ಜೀವನಾಡಿಯಾದ ಮೆಗ್ಗಾನ್ ಆಸ್ಪತ್ರೆಯ ಎದುರು ಬೆಡ್ ಇಲ್ಲ ಎನ್ನುವ ಬೋರ್ಡ್ ಬಿದ್ದಿದೆ. ಪ್ರತಿದಿನ ನೂರಾರು ಮಂದಿ ಆಸ್ಪತ್ರೆ ಎದುರು ಬಂದು ಬೆಡ್‍ಗಾಗಿ ಗೋಗರೆಯುತ್ತಿದ್ದಾರೆ. ಮಧ್ಯಮವರ್ಗ ಹಾಗೂ ಬಡವರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿವೈ ರಾಘವೇಂದ್ರ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ದುಬಾರಿಯಾಗಿದೆ, ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ರೋಗಿಗಳನ್ನು ಅಡ್ಮಿಶನ್ ಮಾಡಿಸುವುದು ಕಷ್ಟಸಾಧ್ಯವಾಗಿದೆ ಶಿವಮೊಗ್ಗ ಉಸ್ತುವಾರಿ ಹೊತ್ತಿರುವ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು, ಇನ್ನಷ್ಟು ಮುತುವರ್ಜಿವಹಿಸಬೇಕಾಗಿದೆ. ಮೆಗ್ಗಾನ್ ಸಾವಿರ ಬೆಡ್‍ನ ಆಸ್ಪತ್ರೆಯಾಗಿದ್ದು, ಸದ್ಯ ಅಲ್ಲಿ 450 ಬೆಡ್‍ಗಳಲ್ಲಷ್ಟೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಇಲ್ಲದಿರುವುದು, ಆಕ್ಸಿಜನ್‍ನ ಕೊರತೆಯಿಂದಾಗಿ ಹೆಚ್ಚುವರಿಯಾಗಿ ಬರುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ.
ಸೂಕ್ತ ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯ ಮತ್ತು ವೆಂಟಿಲೇಟರ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ಭಾಗಗಳಲ್ಲಿ ಕೊರೊನಾ ವ್ಯಾಪಕವಾಗಿ ಭಾದಿಸುತ್ತಿದ್ದು, ಮೊರಾರ್ಜಿ ಶಾಲೆಗಳು, ಸರ್ಕಾರಿ ಹಾಸ್ಟೆಲ್‍ಗಳನ್ನು ಕೋವಿಡ್ ಸೆಂಟರ್‍ಗಳನ್ನಾಗಿ ಪರಿವರ್ತಿಸಬೇಕಿದೆ. ತುರ್ತು ಸಿಬ್ಬಂದಿಯನ್ನು ನೇಮಿಸಿ, ಕ್ಷಿಪ್ರಗತಿಯಲ್ಲಿ ಸೋಂಕಿತರಿಗೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರೋಗಿಗಳು ಸಂಕಷ್ಟ ಪಡುತ್ತಿರುವ ಸನ್ನಿವೇಶ ಒಂದು ಕಡೆಯಾದರೆ, ದಿನಗೂಲಿ ನೌಕರರು, ಬೀದಿ ಬದಿಯ ವ್ಯಾಪಾರಸ್ಥರು, ತಳ್ಳುಗಾಡಿ ವ್ಯಾಪಾರಸ್ಥರು, ಬಡವರು ಆರ್ಥಿಕ ಸಂಕಷ್ಟದಲ್ಲಿರುವವರು ದುಡಿಮೆಯಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ಅವರ ದೈನಂದಿನ ನಿರ್ವಹಣೆಗಾಗಿ, ಪಡಿತರ ವಿತರಣೆಯ ವ್ಯವಸ್ಥೆಯಾಗಬೇಕಿದೆ. ತುರ್ತಾಗಿ ಆಹಾರ ಕಿಟ್‍ಗಳನ್ನು, ಸಣ್ಣ ಮಟ್ಟದ ಧನಸಹಾಯವನ್ನು ಬಯಸುತ್ತಿರುವ ಕಾರ್ಮಿಕ ವರ್ಗದವರಿಗೆ ಸರಕಾರ ಸಹಕಾರ ನೀಡಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.

Ad Widget

Related posts

ರಕ್ತದಾನ ಮಾಡುವ ಮೂಲಕ ರಕ್ತದಾನಿಗಳ ದಿನಾಚರಣೆ ಮಾಡಿದ ಡಾ.ರಾಜನಂದಿನಿ ಕಾಗೋಡು

Malenadu Mirror Desk

ಜಾಹಿರಾತು ತಾರತಮ್ಯ ಖಂಡಿಸಿ ಸಂಪಾದಕರ ಪ್ರತಿಭಟನೆ

Malenadu Mirror Desk

ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.