Malenadu Mitra
ರಾಜ್ಯ

ಅಗಲಿದ ರಾಜರತ್ನ,ತೀವ್ರ ಹೃದಯಾಘಾತದಿಂದ ಪುನೀತ್‌ರಾಜ್‌ಕುಮಾರ್ ನಿಧನ

ಖ್ಯಾತ ನಟ ಪುನೀತ್‌ರಾಜ್‌ಕುಮಾರ್(೪೬) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದ ಪುನೀತ್ ಅವರನ್ನು ತಕ್ಷಣ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲ ನೀಡದೆ ಅವರು ಇಹಲೋಕ ತ್ಯಜಿಸಿದ್ದಾರೆ. ಪುನೀತ್‌ಗೆ ಗುರುವಾರ ರಾತ್ರಿಯೇ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ತನಗೇನು ಆಗಿಲ್ಲ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಅವರು ಶುಕ್ರವಾರ ಬೆಳಗ್ಗೆಯೂ ಜಿಮ್‌ಗೆ ಹೋಗಿದ್ದರೆನ್ನಲಾಗಿದೆ.ಪುನೀತ್ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

ಬಾಲನಟನಾಗಿ ಬೆಟ್ಟದಹೂವು ಸಿನೆಮಾ ಮೂಲಕ ಚಿತ್ರರಂಗದಲ್ಲಿ ಪುಟ್ಟ ಹೆಜ್ಜೆ ಇಟ್ಟಿದ್ದ ಪುನೀತ್ ಚಿತ್ರರಂಗದಲ್ಲಿ ಎಲ್ಲರ ನೆಚ್ಚಿನ ಅಪ್ಪುವಾಗಿ, ತಮ್ಮ ಬಿಂದಾಸ್ ನಟನೆಯಿಂದಾಗಿ ಅಭಿಮಾನಿಗಳ ಪಾಲಿನ ರಾಜಕುಮಾರ ಆಗಿದ್ದರು.
ತಮ್ಮ ಜಬರ್‌ದಸ್ತ್ ನಟನೆಯಿಂದ ಪವರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದ ಪುನೀತ್ ಯುವಕರ ಪಾಲಿನ ಯುವರತ್ನವೇ ಆಗಿದ್ದರು. ಪುನೀತ್ ರಾಜ್‌ಕುಮಾರ್ ಇಡೀ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಪ್ರೀತಿಸುವ ವ್ಯಕ್ತಿಯಾಗಿದ್ದರು. ತನ್ನ ಸಹಜ ಹಾಗೂ ವಿನೀತ ನಡವಳಿಕೆಯಿಂದ ಎಲ್ಲರ ಪ್ರೀತಿಯ ಅಪ್ಪು ಆಗಿದ್ದರು.
ಪುನೀತ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಭೇಟಿ ನೀಡಿ ಆಸ್ಪತ್ರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಸೋದರ ಶಿವರಾಜ್‌ಕುಮಾರ್, ಅಕ್ಕ ಲಕ್ಷ್ಮಿ , ನಟರಾದ ಯಶ್, ದರ್ಶನ್ ಸೇರಿದಂತೆ ಕನ್ನಡದ ಹಿರಿ-ಕಿರಿ ನಟರು, ನಿರ್ಮಾಪಕರು, ನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಮರೆಯಾದ ರಾಜ್‌ಕುಮಾರ:


ಪುನೀತ್ ರಾಜ್‌ಕುಮಾರ್ ಅವರ ರಾಜಕುಮಾರ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮೈಲುಗಲ್ಲಾಗಿತ್ತು. ಮಾನವ ಸಂಬಂಧಗಳು ಮೌಲ್ಯ ಸಾರುವ ಕಥಾ ಹಂದರದ ಸಿನೆಮಾದಲ್ಲಿ ಪುನೀತ್ ಮನೋಜ್ಞವಾಗಿ ಅಭಿನಯಿಸಿದ್ದರು. ಯುವಕರ ಐಕಾನ್ ಆಗಿದ್ದ ಪುನೀತ್ ಅವರ ಅಕಾಲಿಕ ನಿಧನದಿಂದ ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿದೆ. ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರೂ ಎಲ್ಲೂ ಅದನ್ನು ಹೇಳಿಕೊಳ್ಳದೆ ದೊಡ್ಡತನ ಮೆರೆದಿದ್ದರು. ಪುನೀತ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

Ad Widget

Related posts

ಆಸೆ ಸಹಜ, ಕೊಟ್ಟರೆ ಮಾಡುವೆ, ಕೊಡದಿರೆ ಬೇಸರವಿಲ್ಲ

Malenadu Mirror Desk

ಪರೀಕ್ಷೆ ಬಿಟ್ಟು ಪೊಲೀಸರಿಗೆ ದೂರು ಕೊಟ್ಟ ನರ್ಸಿಂಗ್ ವಿದ್ಯಾರ್ಥಿಗಳು

Malenadu Mirror Desk

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ, ಮೇ ೧೭ ಅಥವಾ ೧೮ ರಂದು ಪ್ರಮಾಣ,
ಸರಣಿ ಸಭೆಗಳ ಬಳಿಕ ಅಂತಿಮ ನಿರ್ಣಯಕ್ಕೆ ಬಂದ ಹೈಕಮಾಂಡ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.