ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಿಂದಾಗಿ ಪ್ರಕ್ಷಬ್ದವಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಬಂತೆನ್ನುವಾಗಲೇ ಗೋಪಾಳ ಮುಖ್ಯ ರಸ್ತೆಯ ಪದ್ಮಟಾಕಿಸ್ ಬಳಿ ಗುರುವಾರ ಸಂಜೆ ವೆಂಕಟೇಶ್ ಎಂಬುವವರ ಮೇಲೆ ದುಷ್ಕರ್ಮಿಗಳು ಕಲ್ಲುತೂರಿದ್ದಾರೆ. ಕೊರಮರ ಕೇರಿಯ ವೆಂಕಟೇಶ್(೪೫) ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೆಂಕಟೇಶ್ ಅವರು ನಾಯಿಯೊಂದಿಗೆ ವಾಕಿಂಗ್ ಹೋಗಿದ್ದ ಸಂದರ್ಭ ಸರಕಾರಿ ಶಾಲೆ ಸಮೀಪ ಕಿಡಿಗೇಡಿಗಳು ಅವ್ಯಾಚ್ಯ ಪದ ಬಳಸಿ ಕಲ್ಲು ತೂರಿದ್ದಾರೆ. ವೆಂಕಟೇಶ್ ತಲೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ. ತುಂಗಾನಗರ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಜರಂಗದಳದ ಪ್ರಮುಖರಾದ ದೀನದಯಾಳ್, ಮಹಾನಗರ ಪಾಲಿಕೆ ಸದಸ್ಯರಾದ ಚೆನ್ನಬಸಪ್ಪ, ಜ್ಞಾನೇಶ್,ಪ್ರಮುಖರಾದ ಎಸ್.ದತ್ತಾತ್ರಿ ಸೇರಿದಂತೆ ಅನೇಕ ಮುಖಂಡರು ಆಸ್ಪತ್ರೆಗೆ ಬಂದಿದ್ದಾರೆ. ನಗರದಲ್ಲಿಯೇ ಇದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ವೆಂಕಟೇಶ್ ಆರೋಗ್ಯ ವಿಚಾರಿಸಿ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಶಿವಮೊಗ್ಗ ಶಾಂತಿಯಾಯಿತೆನ್ನುವಾಗಲೇ ನಮ್ಮ ಕಾರ್ಯಕರ್ತನ ಸೋದರನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.
ಆರೋಪಿಗಳು ಪೊಲೀಸ್ ವಶಕ್ಕೆ
ವೆಂಕಟೇಶ್ ಮೇಲೆ ಕಲ್ಲುತೂರಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದ್ದು, ಮದ್ಯವ್ಯಸನಿಗಳು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದ ಸಂದರ್ಭ ಅತ್ತ ವಾಕಿಂಗ್ ಬಂದಿದ್ದ ವೆಂಕಟೇಶ್ ಮೇಲೆ ಕಲ್ಲು ತೂರಲಾಗಿದೆ. ಈ ಘಟನೆಗೆ ಯಾವುದೇ ಧರ್ಮದ ಲೇಪ ಇಲ್ಲ.ಇದೊಂದು ಆಕಸ್ಮಿಕ ಕೃತ್ಯ ಎಂದು ಬಲ್ಲಮೂಲಗಳು ತಿಳಿಸಿವೆ.



