ಶಿವಮೊಗ್ಗ,ಜ.೧: ನೂತನ ವರ್ಷದ ಸಂಭ್ರಮದ ಮನೆ ಸಾವಿನ ಮನೆಯಾದ ದುಃಖಕರ ಘಟನೆಯೊಂದು ಶಿವಮೊಗ್ಗ ನಗರದಲ್ಲಿ ನಡೆದಿದೆ.
ಹೊಸವರ್ಷ ಬರಮಾಡಿಕೊಳ್ಳಲು ನೆರೆದಿದ್ದ ಎಲ್ಲರ ಮನದಲ್ಲೂ ಸೂತಕದ ಛಾಯೆ ಮೂಡಿದೆ. ಹೊಸವರ್ಷ ಪಾರ್ಟಿ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸುವ ಸಂದರ್ಭ ಮಿಸ್ ಫೈರ್ ಆಗಿ ವಿನಯ್ ಎಂಬುವವರು ಗಂಭೀರ ಗಾಯಗೊಂಡಿದ್ದಾನೆ. ಗುಂಡು ಹಾರಿಸಿದ ನಗರದ ಗೋಪಾಲ್ ಗ್ಲಾಸ್ ಮಾಲೀಕ ಮಂಜುನಾಥ್ ಓಲೇಕಾರ್ ಅವರಿಗೆ ಹೃದಯಾಘಾತವಾಗಿದೆ. ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಶಿವಮೊಗ್ಗದ ವಿದ್ಯಾನಗರದ ಮಂಜುನಾಥ್ ಅವರ ಮನೆ ಗ್ಲಾಸ್ ಹೌಸ್ನಲ್ಲಿ ನೂತನ ವರ್ಷಾಚರಣೆ ಆಯೋಜಿಸಲಾಗಿತ್ತು. ೨೦೨೩ ಆರಂಭವಾಗುತ್ತಿದ್ದಂತೆ ಮಂಜುನಾಥ್ ಅವರು ತಮ್ಮ ಡಬಲ್ ಬ್ಯಾರಲ್ ಗನ್ ಲೋಡ್ ಮಾಡಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಅವರ ಮಗ ಸಂದೀಪ್ನ ಸ್ನೇಹಿತ ವಿನಯ್(೩೪) ಎಂಬುವವರಿಗೆ ಹೊಟ್ಟೆಗೆ ಗುಂಡು ತಗುಲಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಅಚಾನಕ್ ಆಗಿ ನಡೆದ ಘಟನೆಯಿಂದ ಆಘಾತಕ್ಕೊಳಗಾದ ಮಂಜುನಾಥ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಪ್ರತಿ ವರ್ಷ ನೂತನ ವರ್ಷಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ಮಂಜುನಾಥ್ ಅವರಿಗೆ ಚಾಳಿಯಾಗಿತ್ತು ಎನ್ನಲಾಗಿದೆ. ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ


