ಶಿವಮೊಗ್ಗ: ಕೇಂದ್ರ ಸರ್ಕಾರವು ವಿಬಿ ಜಿ- ರಾಮ್ ಜಿ ಯೋಜನೆ ಜಾರಿಗೆ ತಂದಿದ್ದು, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಜನರಿಗೆ ನಿಜ ಮಾಹಿತಿ ತಿಳಿಸಲು ಜನಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಅಪಪ್ರಚಾರ ಶುರುವಾಗಿದೆ. ಜನರಿಗೆ ಸತ್ಯದರ್ಶನ ಮಾಡಿಸಲು ಸಮ್ಮೇಳನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಪ್ರತಿ ವಿಧಾನ ಸಭೆ ಕ್ಷೇತ್ರ ,ಜಿಲ್ಲಾ , ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಮಾವೇಶ ನಡೆಸಲಾಗುವುದು.
ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ಅಪಪ್ರಚಾರದ ಮೂಲಕ ನಿಯಂತ್ರಿಸುತ್ತಿದೆ. ಜನರ ಮನಸ್ಸಿನಲ್ಲಿ ತಪ್ಪು ಭಾವನೆ ಬಿತ್ತಲು ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಅವರು ಆರೋಪಿಸಿದರು.
ಉದ್ಯೋಗ ಖಾತ್ರಿ 100 ದಿನದಿಂದ 125 ಕ್ಕೆ ಹೆಚ್ಚಳವಾಗ್ತಿದೆ. ಪಾರದರ್ಶಕತೆ ಮೂಲಕ ಯೋಜನೆ ಜಾರಿ ತರ್ತಿದೆ. ನರೇಗಾದಲ್ಲಿ 22 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ಆಗಿದೆ. ಯೋಜನೆ ಹಣ ಬಡವರ ಬದಲಾಗಿ ಮಧ್ಯವರ್ತಿಗಳ ಕೈ ಸೇರುತ್ತಿತ್ತು. ಯಂತ್ರಗಳ ಮೂಲಕ ಕೆಲಸ ಮಾಡಿ, ಮಧ್ಯವರ್ತಿಗಳು ಹಣ ಮಾಡ್ತಿದ್ದರು.
ನೂತನ ಯೋಜನೆಯಿಂದ ಇದರಿಂದ ಬಡವರಿಗೆ ಯಾವುದೇ ತೊಂದರೆಯಾಗುವುದಿಲ್ಲ.
ರಾಜ್ಯದಲ್ಲೂ 600 ಕ್ಕೂ ಹೆಚ್ಚು ಪ್ರಕರಣದಲ್ಲಿ 669 ಕೋಟಿ ವಂಚನೆ ಆಗಿದೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಪಾರದರ್ಶಕತೆ ತರಲು ಹೊರಟಿದೆ. ಮಹಾತ್ಮ ಗಾಂಧಿ ಹೆಸರನ್ನ ಯಾಕೇ ತೆಗೆದ್ರೀ ಎಂದು ಕಾಂಗ್ರೆಸ್ ಕೇಳುತ್ತಿದೆ. 1992-93 ರಲ್ಲಿ ಯುಪಿಎ ಸರ್ಕಾರ ಪಂಚಾಯತ್ ರಾಜ್ ಕಾಯ್ದೆ ತಂದಿತು. ನಂತರ ಅದನ್ನ ಗ್ರಾಮ ಸ್ವರಾಜ್ ಎಂದು ಬದಲಾಯಿಸಿದ್ದರು. ಈ ಹಿಂದೆ ನಾನೇ ಸಚಿವನಾಗಿದ್ದಾಗ ಸಪ್ತಪದಿ ಯೋಜನೆಯನ್ನು ಈಗ ಮಾಂಗಲ್ಯ ಭಾಗ್ಯ ಮಾಡಿದ್ದಾರೆ. ಕೇಂದ್ರ ಸರ್ಕಾರ, ಮೋದಿ, ಬಿಜೆಪಿಯನ್ನ ದೂರಲು ಈ ಅಪಪ್ರಚಾರ ಮಾಡ್ತಿದ್ದಾರೆ ಎಂದು ಶ್ರೀನಿವಾಸ್ ಪೂಜಾರಿ ಹೇಳಿದರು.
ಭವಿಷ್ಯದ ಸ್ಪಷ್ಟ ಚಿತ್ರಣ:
ದೇಶದಲ್ಲಿ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ದೂರದೃಷ್ಟಿಯಿದೆ. ಜಾಗತಿಕ ಸವಾಲಿನ ನಡುವೆಯೂ ದೇಶದ ಆರ್ಥಿಕತೆಯನ್ನು ಎಚ್ಚರಿಕೆಯಿಂದ ಕೊಂಡೊಯ್ಯುವ ಮುನ್ಸೂಚನೆ ಇದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಯುವಕರಿಗೆ ಉದ್ಯೋಗ ಬೆಲೆ ನಿಯಂತ್ರಣದ ಬಗ್ಗೆ ಸರಕಾರ ಚಿಂತನೆ ನಡೆದಿದೆ. ನಾಳೆ ಮಂಡನೆಯಾಗಲಿರುವ ಕೇಂದ್ರ ಸರಕಾರದ ಬಜೆಟ್ ಕೂಡಾ ಆಶಾದಾಯಕವಾಗಿರುತ್ತದೆ ಎಂದು ಅವರು ಹೇಳಿದರು. ಶಿವಮೊಗ್ಗ ಜಿಲ್ಲೆಯ ರೈಲ್ವೆ ಕ್ಷೇತ್ರ, ಪ್ರವಾಸೋದ್ಯಮ, ರಾಷ್ಟೀಯ ಹೆದ್ದಾರಿ ವಿಚಾರದಲ್ಲಿ ನಿರೀಕ್ಷೆಯಿದೆ ಎಂದು ರಾಘವೇಂದ್ರ ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಮಾಹಿತಿ ವಿನಿಮಯದ ಕೊರತೆ ಎದ್ದು ಕಾಣುತಿದೆ. ಡಿಸಿಎಂ ಅವರು, ಬಿಜೆಪಿ ಸಂಸದರ ಮೇಲೆ ಮಾತನಾಡುವ ಮೊದಲು ತಮ್ಮ ಸರ್ಕಾರದ ಮಾಹಿತಿ ಕೊರತೆಯನ್ನು ಸರಿ ಮಾಡಿಕೊಳ್ಳಲಿ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡುವಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಪ್ರಹ್ಲಾದ್ ಜೋಷಿ ಕೇಂದ್ರ ಮಟ್ಟದಲ್ಲಿ ಪ್ರಯತ್ನ ಮಾಡಿದ್ದಾರೆ. ಡಿಕೆಸಿ ಇತಿಹಾಸ ಅರಿತು ಟೀಕೆ ಮಾಡಬೇಕಿದೆ.
ಬಿ.ವೈ.ರಾಘವೇಂದ್ರ ಸಂಸದರು.
ಹಿಂದೆ ಹೋಗುತ್ತಿರುವ ರಾಜ್ಯ ಸರ್ಕಾರ
ರಾಜ್ಯ ಸರ್ಕಾರ ಚುನಾವಣೆಗೆ ಮತಪತ್ರ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಎಲ್ಲರೂ ತಾಂತ್ರಿಕತೆಯಲ್ಲಿ ಮುಂದೆ ಹೋಗುತಿದ್ದರೆ, ರಾಜ್ಯ ಮತ್ತೆ ಹಿಂದಡಿಒಯಿಡುತ್ತಿರುವುದು ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಒಂದು ಮಾತನಾಡಿದರೆ, ಡಿಕೆಶಿ ಇನ್ನೊಂದು ಹೇಳಿಕೆ ಕೊಡುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಬ್ಯಾಲೆಟ್ ಪೇಪರ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇವರು ಚುನಾವಣೆಯಲ್ಲಿ ಸೋತಾಗ ಇಂತಹ ವಿಷಯ ಮುನ್ನೆಲೆಗೆ ತರುತ್ತಾರೆ. ಕಾಂಗ್ರೆಸ್ ಸರ್ಕಾರ ಜನರನ್ನು ಎದುರಿಸುವ ಶಕ್ತಿ ಕಳೆದುಕೊಂಡಿದೆ ಎಂದು ಸಂಸದರು ಆರೋಪಿಸಿದರು.


