Malenadu Mitra
ರಾಜ್ಯಶಿವಮೊಗ್ಗ

ಮಲೆನಾಡಿಗೆ ಮತ್ತೆ ಮಂಗನಕಾಯಿಲೆ

ಕಟ್ಟೆಹಕ್ಕಲು, ಲಕ್ಕಿನಕೊಪ್ಪದಲ್ಲಿ ಪ್ರಕರಣ ಬೆಳಕಿಗೆ

ಕೊರೊನ ಭರದಲ್ಲಿ ನೇಪಥ್ಯಕ್ಕೆ ಸರಿದಿದ್ದ ಮಂಗನಕಾಯಿಲೆ ಈ ಬಾರಿ ಮತ್ತೆ ವಕ್ಕರಿಸಿದೆ. ಮಂಗಳವಾರ ಎರಡು ಪ್ರಕರಣಗಳು ವರದಿಯಾಗಿವೆ. ಆರಂಭದಲ್ಲಿಯೇ ಮಲೆನಾಡಿನ ಜನ ಎಚ್ಚೆತ್ತುಕೊಳ್ಳಬೇಕು ಮತ್ತು ಸರಕಾರ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಿದೆ.
ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಸಮೀಪದ ನೆಲ್ಲಿಕಟ್ಟೆಯ ಕೂಲಿ ಮಾಡುವ ೫೩ರ ಹರಯದ ಶ್ರೀದೇವಿ ಎನ್ನುವವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದು ಮಂಗಳವಾರ ಪತ್ತೆಯಾದರೆ ಎರಡನೆಯ ಪ್ರಕರಣ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸೋಮವಾರ ಪತ್ತೆಯಾಗಿದೆ. ಇಲ್ಲಿನ ೩೬ ವರ್ಷದ ಕೃಷಿಕರೊಬ್ಬರಲ್ಲಿ ಕಾಯಿಲೆಯ ವೈರಾಣು ಕಂಡುಬಂದಿದೆ. ಇವರಿಬ್ಬರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶ್ರೀದೇವಿ ಅವರ ಮನೆಯವರೆಲ್ಲ ಈ ಬಾರಿ ಮಂಗನ ಕಾಯಿಲೆಯ ಮುಂಜಾಗ್ರತೆಯಾಗಿ ಲಸಿಕೆ ಪಡೆದಿದ್ದರು. ಆದರೆ ಶ್ರೀದೇವಿ ಮಾತ್ರ ಲಸಿಕೆ ಪಡೆದಿರಲಿಲ್ಲ ಎಂದು ಗೊತ್ತಾಗಿದೆ. ಫೆ. ೨೨ರಂದು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಎಫ್‌ಡಿ ಸಂಶಯವಿದ್ದುದರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿತ್ತು.
ಇದೇ ವೇಳೆ ತಾಲೂಕಿನ ಹಲವೆಡೆ ಸುಮಾರು ೧೦ಕ್ಕೂ ಹೆಚ್ಚು ಮಂಗಗಳು ಸತ್ತುಬಿದ್ದಿರುವುದು ಬೆಳಕಿಗೆ ಬಂದಿದ್ದು, ಅವುಗಳನ್ನು ಸಮರ್ಪಕವಾಗಿ ಸುಟ್ಟುಹಾಕಲಾಗಿದೆ. ಆದರೆ ಇವ್ಯಾವುದರಲ್ಲೂ ವೈರಾಣು ಕಂಡುಬಂದಿಲ್ಲ ಎಂದು ವರದಿಯಾಗಿದೆ. ಲಕ್ಕಿನಕೊಪ್ಪದ ಪುರುಷನಿಗೆ ಸುಸ್ತು, ಜ್ವರ ಇದ್ದುದರಿಂದ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಕಳುಹಿಸಲಾಗಿತ್ತು. ಕೃಷಿಕರಾದ ಈ ವ್ತಕ್ತಿಗೆ ಸೋಂಕು ತಗುಲಿದ ಬಗ್ಗೆ ಗೊತ್ತಾಗಿಲ್ಲ.
ಇದಕ್ಕೂ ಮುನ್ನ ಈ ವರ್ಷದ ಪ್ರಥಮ ಪ್ರಕರಣ ಪಕ್ಕದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕುಳಿಬೀಡು ಗ್ರಾಮದ ೫೯ರ ಮಹಿಳೆಯೊಬ್ಬರಲ್ಲಿ ಜನವರಿ ಅಂತ್ಯದಲ್ಲಿ ಕಂಡುಬಂದಿತ್ತು. ಅವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಗುಣಮು
ಖರಾಗಿದ್ದರು. ಇದಾದ ಕೆಲವೇ ದಿನಗಳ ನಂತರ ಎನ್. ಆರ್. ಪುರ ತಾಲೂಕಿನಲ್ಲಿ ವ್ಯಕ್ತಿಯೊಬ್ಬರಲ್ಲಿ ಮಂಗನ ಕಾಯಿಲೆ ಕಂಡುಬಂದಿತ್ತು. ಅವರು ಸಹ ಮಣಿಪಾಲದಲ್ಲಿ ಗುಣಮುಖರಾಗಿ ಬಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಎರಡು ಪ್ರಕರಣ ವರದಿಯಾದಂತಾಗಿದೆ.

Ad Widget

Related posts

ಶ್ರೀಕಾಂತ್ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

Malenadu Mirror Desk

ಕೊಡಕಣಿ ಗ್ರಾಮಸ್ಥರಿಂದ ಅಳಿಯ ಹಾಗೂ ಸಚಿವ ಸುನೀಲ್ ಕುಮಾರ್ ಅವರಿಗೆ ಸನ್ಮಾನ

Malenadu Mirror Desk

ದಂಡಿ,ದಾಳಿಗೆ ಹೆದರದ ರೇಣುಕಾಚಾರ್ಯ ಮಂಗಕ್ಕೆ ಹೆದರಿದ್ಯಾಕೆ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.